Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

09 August 2023

ಯು.ಎಸ್.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣ

2022-23 ನೇ ಸಾಲಿನಲ್ಲಿ ಕೇರಳ ಸರಕಾರದ ವಿದ್ಯಾಭ್ಯಾಸ ಇಲಾಖೆಯು ನಡೆಸಿದ ಯು.ಎಸ್.ಎಸ್ ಪರೀಕ್ಷೆಯಲ್ಲಿ  ನಮ್ಮ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿಯರಾದ ಅನಘಲಕ್ಷ್ಮಿ ಹಾಗೂ ಪ್ರಣ್ಯ ಎಮ್ ನಾಯಕ್ ತೇರ್ಗಡೆ ಹೊಂದಿ ವಿದ್ಯಾರ್ಥಿ ವೇತನಕ್ಕೆ ಅರ್ಹತೆ ಪಡೆದಿದ್ದಾರೆ.

ಶುಭ ಹಾರೈಕೆಗಳು.

21 June 2023

ನೀರ್ಚಾಲು ಶಾಲೆಗೆ ಫ್ಯಾನ್ ಕೊಡುಗೆ



ಕೊಲ್ಲಂಗಾನದ ನವೀನ್ ಲಸ್ರಾದೊ ಮತ್ತು ಎ.ಮೇರಿ ಇವರ ಪುತ್ರಿ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿನಿ ಮೆಲಾನಿ ಲಸ್ರಾದೊ ಶಾಲೆಯ ಹಿರಿಯ ಪ್ರಾಥಮಿಕ ವಿಭಾಗದ ತರಗತಿಗಳಿಗೆ ಹತ್ತು ಫ್ಯಾನುಗಳನ್ನು 21.06.2023 ಬುಧವಾರ ಯೋಗ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಕೊಡುಗೆಯಾಗಿ ನೀಡಿದಳು. ಶಾಲಾ ಮುಖ್ಯೋಪಾಧ್ಯಾಯ ಶಿವಪ್ರಕಾಶ್ ಎಂ.ಕೆ ಸ್ವೀಕರಿಸಿದರು.

19 May 2023

ನೀರ್ಚಾಲು ಶಾಲೆಯ 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

 

2022-23ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ  177 ಮಂದಿ ಪರೀಕ್ಷೆ ಬರೆದಿದ್ದು 177 ಮಂದಿ ಮುಂದಿನ ಹಂತಕ್ಕೆ ತೇರ್ಗಡೆ ಹೊಂದಿ ಶಾಲೆಗೆ 100% ಫಲಿತಾಂಶವನ್ನು ತಂದಿದ್ದಾರೆ. ಪ್ರಸ್ತುತ ಶಾಲೆಯಲ್ಲಿ 29 ಮಂದಿ ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲಿ ಎ+ ಗ್ರೇಡ್ ಪಡೆದಿದ್ದಾರೆ. ಈ ಶಾಲೆಯ ಆಕಾಶ್ ಎನ್, ಅಕ್ಷಯ್ ವಿ, ಅಮೋಘ ಕೃಷ್ಣ ಎಂ, ಅನಘ ಪಿ.ಎಸ್, ಅನರ್ಘ್ಯಶ್ರೀ ಐ, ಅನೀಶ ಕೃಷ್ಣ ಕೆ, ಅನಿಕೇತ್ ಸುಬ್ರಾಯ ಭಟ್, ಚಿನ್ಮಯಿ ಭಾರದ್ವಾಜ್ ಕೆ, ದೀಪ ಸಿ.ಎಚ್, ಧನುಶ್ರೀ ಜಿ.ಕೆ, ಧನ್ಯ ಗಣೇಶ್ ಜಿ.ಕೆ, ಹರ್ಷಿತ, ಜಿಷಮೋಳ್ ಬಿ.ಎಂ, ಕೆ. ದುರ್ಗಾ ಶಂಕರ ಅಡಿಗ, ಮಹೇಶ್ವರ ಕೆ.ಎಸ್, ಮಾನಸ ಎಚ್.ಕೆ, ನಂದನ.ಕೆ, ಪಿ.ಎಸ್.ಶಿವಾನಿ, ಸಂಜನ ಕೆ.ಎಸ್, ಶ್ರವಣ ರೈ ಕೆ, ಸಿಂಚನ ವೈ ಶೆಟ್ಟಿ, ಸೂರಜ್ ಪಿ.ಎಸ್, ಸುದರ್ಶನ ಕೆ, ಸುಮನ್ ಕೆ.ವಿ, ಸುಮಂತ್ ಎಸ್.ಎನ್, ತ್ವಿಷ ರೈ, ವೈಶಾಲಿ ಸಿ.ಎಚ್, ವರದರಾಜ್ ಕೆ.ಆರ್, ಯುಕ್ತಿ ಕುಲಾಲ್ ಈ ಸಾಧನೆಯನ್ನು ಪ್ರದರ್ಶಿಸಿದ್ದಾರೆ. ಎಲ್ಲರಿಗೂ ಶುಭಾಶಯಗಳು...

06 December 2022

ಶಾಲಾ ಕಲೋತ್ಸವ: ರಾಜ್ಯ ಮಟ್ಟಕ್ಕೆ ಆಯ್ಕೆ


 

ಇತ್ತೀಚೆಗೆ ಚಾಯೋತ್ ನಲ್ಲಿ ಜರಗಿದ ಕಾಸರಗೋಡು ಕಂದಾಯ ಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ಸ್ಪರ್ಧೆಗಳಲ್ಲಿ ರಾಜ್ಯ ಮಟ್ಟದಲ್ಲಿ ಸ್ಪರ್ಧಿಸಲು ಅರ್ಹತೆ ಪಡೆದಿದ್ದಾರೆ. ಸಂಸ್ಕೃತ ಪ್ರಭಾಷಣಂನಲ್ಲಿ ಒಂಬತ್ತನೇ ತರಗತಿಯ ಅನಿರುದ್ಧ ಕೆ.ಎನ್, ಹಿಂದಿ ಉಪನ್ಯಾಸ ರಚನೆಯಲ್ಲಿ ಹತ್ತನೇ ತರಗತಿಯ ಸುದರ್ಶನ. ಕೆ, ಸಂಸ್ಕೃತ ಸಮಸ್ಯಾಪೂರಣದಲ್ಲಿ ಹತ್ತನೇ ತರಗತಿಯ ಅನಿಕೇತ್ ಸುಬ್ರಾಯ ಭಟ್, ಸಂಸ್ಕೃತ ಪ್ರಶ್ನೋತ್ತರಿಯಲ್ಲಿ ಹತ್ತನೇ ತರಗತಿಯ ವರದರಾಜ ಕೆ.ಆರ್,  ಕನ್ನಡ ಕಂಠಪಾಠ ಮತ್ತು ಸಂಸ್ಕೃತ ಗಾನಾಲಾಪನಂ ಸ್ಪರ್ಧೆಗಳಲ್ಲಿ ಒಂಬತ್ತನೇ ತರಗತಿಯ ಅನ್ವಿತಾ ಟಿ. ಪ್ರಥಮ ಸ್ಥಾನ ಗಳಿಸಿ ಜನವರಿಯಲ್ಲಿ ಕಲ್ಲಿಕೋಟೆಯಲ್ಲಿ  ರಾಜ್ಯ ಕಲೋತ್ಸವದಲ್ಲಿ ಸ್ಪರ್ಧಿಸಲಿದ್ದಾರೆ. ಉತ್ತಮ ಸಾಧನೆ ಪ್ರದರ್ಶಿಸಿದ ಈ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಅಧ್ಯಾಪಕ ವೃಂದ, ಸಿಬ್ಬಂದಿ ವರ್ಗ, ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.

26 November 2022

ಕುಂಬಳೆ ಶಾಲಾ ಕಲೋತ್ಸವ - ನಮ್ಮ ಶಾಲೆಗೆ ಚಾಂಪಿಯನ್ ಪಟ್ಟ


ಇತ್ತೀಚೆಗೆ ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿದ ಕುಂಬಳೆ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದ ವಿವಿಧ ವಿಭಾಗಗಳಲ್ಲಿ ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಪ್ರೌಢಶಾಲಾ ಸಂಸ್ಕೃತೋತ್ಸವದಲ್ಲಿ ಅತ್ಯಧಿಕ ಅಂಕಗಳನ್ನು ಪಡೆದು ಚಾಂಪಿಯನ್ ಪಟ್ಟ, ಹಿರಿಯ ಪ್ರಾಥಮಿಕ ವಿಭಾಗದ ಸಂಸ್ಕೃತೋತ್ಸವದಲ್ಲಿ ರನ್ನರ್ಸ್ ಅಪ್, ಕಲೋತ್ಸವ ಪ್ರೌಢಶಾಲಾ ವಿಭಾಗದ ರನ್ನರ್ಸ್ ಅಪ್ ಪ್ರಶಸ್ತಿಯನ್ನು ನೀರ್ಚಾಲು ಶಾಲೆಯ ವಿದ್ಯಾರ್ಥಿಗಳು ಗಳಿಸಿದ್ದಾರೆ. ಈ ಮೂಲಕ ಕಲೋತ್ಸವದ ವಿವಿಧ ವಿಭಾಗಗಳಲ್ಲಿ ಮೂರು ಟ್ರೋಫಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.



21 October 2022

ನೀರ್ಚಾಲಿನಲ್ಲಿ ಕುಂಬಳೆ ಉಪಜಿಲ್ಲಾ ಮಟ್ಟದ ‘ಶಾಸ್ತ್ರೋತ್ಸವ’ ಆರಂಭ


 “ಶತಮಾನಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಪ್ರಧಾನ ಸೇವೆ ಸಲ್ಲಿಸುತ್ತಿರುವ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗಳಲ್ಲಿ ಈ ಬಾರಿಯ ಕುಂಬಳೆ ಉಪಜಿಲ್ಲಾ ಮಟ್ಟದ ಶಾಸ್ತ್ರೋತ್ಸವದ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಂಡಿರುವುದು ಸಂತೋಷದ ವಿಷಯ. ಕಳೆದ ಎರಡು ವರ್ಷಗಳಲ್ಲಿ ತೊಂದರೆಗೊಳಗಾದ ವಿದ್ಯಾರ್ಥಿಗಳ ಚಟುವಟಿಕೆಗಳು ಈ ಮೂಲಕ ಗರಿಗೆದರುತ್ತಿರುವುದು ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ನಾಂದಿಹಾಡಲಿದೆ. ಖಂಡಿಗೆ ಶಾಮ ಭಟ್ಟರಂತಹ ಮಹಾನುಭಾವರು ನಡೆದಾಡಿದ ನೆಲದಲ್ಲಿ ಈ ಪಠ್ಯೇತರ ಚಟುವಟಿಕೆಗಳ ಹಬ್ಬಕ್ಕೆ ಚಾಲನೆ ದೊರೆತಿರುವುದು ಸಮಾಜಕ್ಕೆ ಉತ್ತಮ ಸಂದೇಶ ನೀಡಲಿದೆ ಎಂದು ಕಾಸರಗೋಡು ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಎ.ನೆಲ್ಲಿಕುನ್ನು ಅಭಿಪ್ರಾಯಪಟ್ಟರು. ಅವರು 21.10.2022 ಶುಕ್ರವಾರ ಬೆಳಗ್ಗೆ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಮತ್ತು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕುಂಬಳೆ ಉಪಜಿಲ್ಲಾ ಮಟ್ಟದ ‘ಶಾಸ್ತ್ರೋತ್ಸವಂ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷೆ ಶ್ರೀಮತಿ ಶಾಂತಾ ಬಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜಿಲ್ಲಾ ಪಂಚಾಯತು ಸದಸ್ಯೆ ಶ್ರೀಮತಿ ಎಂ.ಶೈಲಜಾ ಭಟ್, ಬದಿಯಡ್ಕ ಗ್ರಾಮ ಪಂಚಾಯತು ಉಪಾಧ್ಯಕ್ಷ ಅಬ್ಬಾಸ್ ಎಂ, ಕಾಸರಗೋಡು ಬ್ಲೋಕ್ ಪಂಚಾಯತು ಸದಸ್ಯೆ ಶ್ರೀಮತಿ ಜಯಂತಿ, ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯೆ ಶ್ರೀಮತಿ ಜಯಶ್ರೀ ಪಿ, ಕುಂಬಳೆ ಬಿಪಿಸಿ ಜಯರಾಮ್ ಜೆ, ಬದಿಯಡ್ಕ ಗ್ರಾಮ ಪಂಚಾಯತು ಪಿಇಸಿ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆ, ಕುಂಬಳೆ ಉಪಜಿಲ್ಲಾ ಮುಖ್ಯೋಪಾಧ್ಯಾಯರ ಸಂಘಟನೆಯ ಸಂಚಾಲಕ ವಿಷ್ಣುಪಾಲ ಬಿ, ಕುಂಬಳೆ ಉಪಜಿಲ್ಲಾ ಏಕ್ಟಿವಿಟಿ ಕಮಿಟಿಯ ಸಂಚಾಲಕ ಸುರೇಂದ್ರನ್ ಎಂ.ವಿ, ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮಾಲತಿ.ವೈ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರುಗಳಾದ ಎಸ್.ನಾರಾಯಣ ಮತ್ತು ಮೋಹನ್ ಡಿ.ಎನ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಈಶ್ವರ ನಾಯಕ್, ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲಾ ಪ್ರಭಾರ ಪ್ರಾಂಶುಪಾಲ ಎಂ.ಸುಬ್ರಹ್ಮಣ್ಯನ್ ಉಪಸ್ಥಿತರಿದ್ದರು.

ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆಯವರು ಧ್ವಜಾರೋಹಣಗೈದರು. ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಯತೀಶ್ ಕುಮಾರ್ ರೈ ಸ್ವಾಗತಿಸಿ, ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲಾ ಮುಖ್ಯೋಪಾಧ್ಯಾಯ ಶಿವಪ್ರಕಾಶ್ ಎಂ.ಕೆ ಧನ್ಯವಾದ ಸಮರ್ಪಿಸಿದರು. ಶಾಲಾ ಶಿಕ್ಷಕ ವಿಶ್ವನಾಥ ಭಟ್ ಕಾರ್ಯಕ್ರಮ ನಿರೂಪಿಸಿದರು.

ಅಕ್ಟೋಬರ್ 21 ರಂದು ಸಮಾಜ ವಿಜ್ಞಾನ, ಗಣಿತ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ಸ್ಪರ್ಧೆಗಳು ಮತ್ತು ಅಕ್ಟೋಬರ್ 22 ರಂದು ವಿಜ್ಞಾನ ಮತ್ತು ವೃತ್ತಿಪರಿಚಯಕ್ಕೆ ಸಂಬಂಧಿಸಿದ ಸ್ಪರ್ಧೆಗಳು ಜರಗಲಿವೆ. ಕಾರ್ಯಕ್ರಮದಲ್ಲಿ ಕುಂಬಳೆ ಉಪಜಿಲ್ಲೆಯ ವಿವಿಧ ಸರಕಾರಿ, ಅನುದಾನಿತ ಮತ್ತು ಅನನುದಾನಿತ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. ಸ್ಪರ್ಧೆಗಳು ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಮತ್ತು ಹೈಯರ್ ಸೆಕೆಂಡರಿ ವಿಭಾಗದ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಜರಗುತ್ತಿವೆ. ಕುಂಬಳೆ ಉಪಜಿಲ್ಲೆಯ 117 ಶಾಲೆಗಳಿಂದ 3146 ಮಂದಿ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ.

14 October 2022

ನೀರ್ಚಾಲಿನಲ್ಲಿ ಅಕ್ಟೋಬರ್ 21,22 ರಂದು ಕುಂಬಳೆ ಉಪಜಿಲ್ಲಾ ಮಟ್ಟದ ‘ಶಾಸ್ತ್ರೋತ್ಸವ’


ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಮತ್ತು ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2022 ಅಕ್ಟೋಬರ್ 21 ಶುಕ್ರವಾರ ಮತ್ತು 22 ಶನಿವಾರಗಳಂದು ಕುಂಬಳೆ ಉಪಜಿಲ್ಲಾ ಮಟ್ಟದ ‘ಶಾಸ್ತ್ರೋತ್ಸವಂ’ ಜರಗಲಿದೆ. ಅಕ್ಟೋಬರ್ 21 ರಂದು ಸಮಾಜ ವಿಜ್ಞಾನ, ಗಣಿತ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ಸ್ಪರ್ಧೆಗಳು ಮತ್ತು ಅಕ್ಟೋಬರ್ 22 ರಂದು ವಿಜ್ಞಾನ ಮತ್ತು ವೃತ್ತಿಪರಿಚಯಕ್ಕೆ ಸಂಬಂಧಿಸಿದ ಸ್ಪರ್ಧೆಗಳು ಜರಗಲಿವೆ. ಕಾರ್ಯಕ್ರಮದಲ್ಲಿ ಕುಂಬಳೆ ಉಪಜಿಲ್ಲೆಯ ವಿವಿಧ ಸರಕಾರಿ, ಅನುದಾನಿತ ಮತ್ತು ಅನನುದಾನಿತ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಸ್ಪರ್ಧೆಗಳು ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಮತ್ತು ಹೈಯರ್ ಸೆಕೆಂಡರಿ ವಿಭಾಗದ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಜರಗಲಿದೆ.

21.10.2022 ಶುಕ್ರವಾರ ಬೆಳಗ್ಗೆ 9 ಗಂಟೆಗೆ ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆಯವರು ಧ್ವಜಾರೋಹಣಗೈಯಲಿದ್ದಾರೆ. ನಂತರ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷೆ ಶ್ರೀಮತಿ ಶಾಂತಾ ಬಿ ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಕಾಸರಗೋಡು ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಎ.ನೆಲ್ಲಿಕುನ್ನು ನೆರವೇರಿಸಲಿದ್ದಾರೆ.

ಕಾಸರಗೋಡು ಜಿಲ್ಲಾ ಪಂಚಾಯತು ಸದಸ್ಯೆ ಶ್ರೀಮತಿ ಎಂ.ಶೈಲಜಾ ಭಟ್, ಕಾಸರಗೋಡು ಕಂದಾಯ ಜಿಲ್ಲಾ ಶಿಕ್ಷಣಾಧಿಕಾರಿ ಶ್ರೀಮತಿ ಪುಷ್ಪಾ ಕೆ.ವಿ, ಡಯಟ್ ಕಾಸರಗೋಡಿನ ಪ್ರಾಂಶುಪಾಲ ಕೆ.ರಘುರಾಮ ಭಟ್, ಕಾಸರಗೋಡು ಜಿಲ್ಲಾ ವಿದ್ಯಾಧಿಕಾರಿ ಎನ್.ನಂದಿಕೇಶನ್, ‘ಕೈಟ್’ ಜಿಲ್ಲಾ ವ್ಯವಸ್ಥಾಪಕ ರಾಜೇಶ್ ಎಂ.ಪಿ, ಬದಿಯಡ್ಕ ಗ್ರಾಮ ಪಂಚಾಯತು ಉಪಾಧ್ಯಕ್ಷ ಅಬ್ಬಾಸ್ ಎಂ, ಬದಿಯಡ್ಕ ಗ್ರಾಮ ಪಂಚಾಯತು ಆರೋಗ್ಯ ಮತ್ತು ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷೆ ಶ್ರೀಮತಿ ರಶೀದಾ ಹಮೀದ್, ಕಾಸರಗೋಡು ಬ್ಲೋಕ್ ಪಂಚಾಯತು ಸದಸ್ಯೆ ಶ್ರೀಮತಿ ಜಯಂತಿ, ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯೆ ಶ್ರೀಮತಿ ಜಯಶ್ರೀ ಪಿ, ಕುಂಬಳೆ ಬಿಪಿಸಿ ಜಯರಾಮ್ ಜೆ, ಬದಿಯಡ್ಕ ಗ್ರಾಮ ಪಂಚಾಯತು ಪಿಇಸಿ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆ, ಕುಂಬಳೆ ಉಪಜಿಲ್ಲಾ ಮುಖ್ಯೋಪಾಧ್ಯಾಯರ ಸಂಘಟನೆಯ ಸಂಚಾಲಕ ವಿಷ್ಣುಪಾಲ ಬಿ, ಕುಂಬಳೆ ಉಪಜಿಲ್ಲಾ ಏಕ್ಟಿವಿಟಿ ಕಮಿಟಿಯ ಸಂಚಾಲಕ ಸುರೇಂದ್ರನ್ ಎಂ.ವಿ, ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮಾಲತಿ.ವೈ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರುಗಳಾದ ಎಸ್.ನಾರಾಯಣ ಮತ್ತು ಮೋಹನ್ ಡಿ.ಎನ್ ಕಾರ್ಯಕ್ರಮಕ್ಕೆ ಶುಭಹಾರೈಸಲಿದ್ದಾರೆ. ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಯತೀಶ್ ಕುಮಾರ್ ರೈ ಸ್ವಾಗತಿಸಿ, ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲಾ ಮುಖ್ಯೋಪಾಧ್ಯಾಯ ಶಿವಪ್ರಕಾಶ್ ಎಂ.ಕೆ ಧನ್ಯವಾದ ಸಮರ್ಪಿಸಲಿದ್ದಾರೆ.

22.10.2022 ಶನಿವಾರ ಅಪರಾಹ್ಣ 3 ಗಂಟೆಗೆ ಜರಗಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಯತೀಶ್ ಕುಮಾರ್ ರೈ ವಹಿಸಲಿದ್ದಾರೆ. ಬದಿಯಡ್ಕ ಪೋಲೀಸ್ ಇನ್‌ಸ್ಪೆಕ್ಟರ್ ಅಶ್ವಿತ್ ಎಸ್.ಕರಣ್ಮಯಿಲ್, ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ನೀರ್ಚಾಲು ಘಟಕದ ಅಧ್ಯಕ್ಷ ಎಂ.ಸುಬ್ರಹ್ಮಣ್ಯ ಭಟ್, ಶಾಲಾ ರಕ್ಷಕ ಶಿಕ್ಷಕ ಸಂಘದ ಮಾತೃ ವಿಭಾಗದ ಅಧ್ಯಕ್ಷರುಗಳಾದ ಗಿರಿಜಾ ಮತ್ತು ಸಿಂಧು ಟಿ ಬಹುಮಾನಗಳನ್ನು ವಿತರಿಸಲಿದ್ದಾರೆ. ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲಾ ಪ್ರಭಾರ ಪ್ರಾಂಶುಪಾಲ ಎಂ.ಸುಬ್ರಹ್ಮಣ್ಯನ್ ಸ್ವಾಗತಿಸಿ, ಪ್ರೋಗ್ರಾಂ ಕಮಿಟಿಯ ಸಂಚಾಲಕ ಕೆ.ಗೋವಿಂದ ಶರ್ಮ ಧನ್ಯವಾದ ಸಮರ್ಪಿಸಲಿದ್ದಾರೆ.

ನೀವೆಲ್ಲರೂ ಬನ್ನಿ...

04 July 2022

ಮರು ಮೌಲ್ಯಮಾಪನ ಫಲಿತಾಂಶ

ಕೇರಳ ಸರಕಾರದ ವಿದ್ಯಾಭ್ಯಾಸ ಇಲಾಖೆಯು ಕಳೆದ ಎಪ್ರಿಲ್ ತಿಂಗಳಿನಲ್ಲಿ ನಡೆಸಿದ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಮರು ಮೌಲ್ಯಮಾಪನದ ಫಲಿತಾಂಶವು ಇದೀಗ ಪ್ರಕಟವಾಗಿದ್ದು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ನಾಲ್ಕು ಮಂದಿ ವಿದ್ಯಾರ್ಥಿಗಳು ಉನ್ನತ ಗ್ರೇಡ್ ಪಡೆದು ಎಲ್ಲಾ ವಿಷಯಗಳಲ್ಲೂ ಎ+ ಗ್ರೇಡ್ ಪಡೆದ ಹಿರಿಮೆಯನ್ನು ಸಾಧಿಸಿದ್ದಾರೆ. ಈ ಮೂಲಕ ಒಟ್ಟು 17 ಮಂದಿ ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲೂ ಎ+ ಗ್ರೇಡ್ ಪಡೆದಂತಾಗಿದೆ. ಶ್ರೀಲಕ್ಷ್ಮಿ. ಕೆ, ಕಿಶನ್ ಕುಮಾರ್. ಜಿ, ಸಿದ್ಧಾರ್ಥ್. ಎಸ್ ಮತ್ತು  ಶ್ರೀನಿವಾಸ ಶರ್ಮ.ಎನ್ ಇತ್ತೀಚೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಬಂದ ಸಂದರ್ಭದಲ್ಲಿ ಒಂಬತ್ತು ವಿಷಯಗಳಲ್ಲಿ ಮಾತ್ರ ಎ+ ಗ್ರೇಡ್ ಪಡೆದಿದ್ದರು. ಶುಭಾಶಯಗಳು...

15 June 2022

ನಮ್ಮ ಶಾಲೆಯ 13 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+


2021-22ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ನಮ್ಮ ಶಾಲೆಯ  161 ಮಂದಿ ಪರೀಕ್ಷೆ ಬರೆದಿದ್ದು 161 ಮಂದಿ ಮುಂದಿನ ಹಂತಕ್ಕೆ ತೇರ್ಗಡೆ ಹೊಂದಿ ಶಾಲೆಗೆ 100% ಫಲಿತಾಂಶವನ್ನು ತಂದಿದ್ದಾರೆ. ಪ್ರಸ್ತುತ ಶಾಲೆಯಲ್ಲಿ 13 ಮಂದಿ ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲಿ ಎ+ ಗ್ರೇಡ್ ಪಡೆದಿದ್ದಾರೆ. ಈ ಶಾಲೆಯ ಅಚಲ ಪಿ, ಅನಘ ಟಿ, ಆಯಿಶತ್ ಅಲ್ಫೀನಾ ಎಂ ಬಿ, ಚರಿಷ್ಮಾ ಕೆ, ಧನುಶ್ ಕುಮಾರ್, ಕೃಪಾನಿಧಿ ಕೆ, ಮಧು ಸುಹನ್ ರೈ, ಮಿಥುನ್‍ರಾಜ್ ಪಿ, ಸಮಿಕ್ಷಾ ಡಿ ಶೆಟ್ಟಿ, ಸೌರಭ ಕೆ, ಶರತ್ ಎಸ್, ಸ್ಮಿತಾ ಕೆ, ತರುಣ್ ರೈ ಈ ಸಾಧನೆಯನ್ನು ಪ್ರದರ್ಶಿಸಿದ್ದಾರೆ. ಎಲ್ಲರಿಗೂ ಶುಭಾಶಯಗಳು...

21 February 2022

ನಮ್ಮ ಶಾಲೆಯ ಸ್ಕೌಟ್ಸ್ ಗಳಿಗೆ ರಾಜ್ಯಪುರಸ್ಕಾರ


ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್  ಕೇರಳ ರಾಜ್ಯ ಘಟಕವು ನಡೆಸಿದ  ರಾಜ್ಯಪುರಸ್ಕಾರ ಪರೀಕ್ಷೆಯಲ್ಲಿ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ಸ್ಕೌಟ್ ವಿದ್ಯಾರ್ಥಿಗಳಾದ ಅರವಿಂದ ಕೃಷ್ಣ ಎಮ್, ಕಿಶನ್ ಎ, ರೋಹಿತ್ ಎ ಆರ್, ಸಂದೇಶ್ ಎನ್, ಸಾತ್ವಿಕ್ ಎ ಯಸ್, ತರುಣ್ ರೈ, ತೇಜಸ್ ಯಮ್ ಕೆ, ಉತ್ತಮ್ ಕೆ ಉತ್ತೀರ್ಣರಾಗಿ ರಾಜ್ಯಪುರಸ್ಕಾರ  ಪಡೆದಿರುತ್ತಾರೆ. ಇವರನ್ನು ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದ ಅಭಿನಂದಿಸಿದೆ.

ನಮ್ಮ ಶಾಲೆಯ ಗೈಡ್ಸ್ ಗಳಿಗೆ ರಾಜ್ಯಪುರಸ್ಕಾರ

 

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್  ಕೇರಳ ರಾಜ್ಯ ಘಟಕವು ನಡೆಸಿದ  ರಾಜ್ಯಪುರಸ್ಕಾರ ಪರೀಕ್ಷೆಯಲ್ಲಿ ನಮ್ಮ ಶಾಲೆಯ ಗೈಡ್ಸ್ ವಿದ್ಯಾರ್ಥಿಗಳಾದ ಅನಘ ವಿ ಅಸ್ರ, ಭವ್ಯಶ್ರೀ ಸಿ ಯಚ್, ಧನ್ಯಶ್ರೀ ಎನ್, ಹರ್ಷಿತ ಸಿ ಯಚ್, ಜಯಲಕ್ಷ್ಮಿ ಎಸ್, ರಿಷಿಕ ಪಿ, ಶ್ರೇಯ ಕೆ ಎಸ್, ಸಿಂಚನ ಎನ್, ವೈಷ್ಣವಿ ಎ, ವಿಭಾ ಓ, ವಿಶ್ಮಿತ ಬಿ ಉತ್ತೀರ್ಣರಾಗಿ ರಾಜ್ಯಪುರಸ್ಕಾರ  ಪಡೆದಿರುತ್ತಾರೆ. ಇವರನ್ನು ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದ ಅಭಿನಂದಿಸಿದೆ.

14 July 2021

ನಮ್ಮ ಶಾಲೆಯ 35 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

 


2020-21ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶವು ಇಂದು ಪ್ರಕಟವಾಗಿದ್ದು ನಮ್ಮ ಶಾಲೆಯ 35 ಮಂದಿ ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲಿ ಎ+ ಗ್ರೇಡ್ ಪಡೆದಿದ್ದಾರೆ. ಈ ಶಾಲೆಯ ಐಶ್ವರ್ಯ ಎನ್ ಆರ್, ಅನಘಾ ಎಂ ರವಿ, ಅನಿರುದ್ಧ, ದೀಕ್ಷಾ, ಹರಿ ಕೃಷ್ಣ ಆರ್, ಜನ್ಯಶ್ರೀ ಕೆ, ಜ್ಯೋತಿಪ್ರಿಯ ಲೋಬೊ, ಕೆ ವಿ ಅಕ್ಷಯ್ ಕೃಷ್ಣ, ಕಾರ್ತಿಕ್ ಕೆ ಎಸ್, ಕವನ ಎನ್, ಕಾವ್ಯಾ, ಲಿಖಿತಾ ಎಸ್, ಲಿಕಿತಾ, ಮೃದುಲಾ ಪಿ, ನಿತ್ಯಾ ಶ್ರೀ, ಪಿ ಎಸ್ ಶ್ರೀ ವಿಷ್ಣು, ಪಲ್ಲವಿ ಎನ್, ಪೂಜಶ್ರೀ ಎಂ, ಪ್ರತೀಕ್ಷ ಎ, ಸಂಪತ್ ಕೆ, ಶಮಾ ಎನ್, ಶಾಂತಿ ಪ್ರಿಯಾ, ಶರಣ್ಯ ಟಿ ಎಸ್, ಶರತ್ ಕುಮಾರ್ ಕೆ, ಶ್ರೀಜಿತ್ ಕೆ, ಶ್ರೀಕಲ ಕೆ, ಶ್ರೇಯಾ, ಶ್ರೀ ನಂದನ ಐ, ಶ್ರೀಗಿರಿ ಕೆ, ಸ್ನೇಹಾ. ಎಂ, ಶ್ರೀನಿವಾಸ ಕೆ, ಸುಬ್ರಹ್ಮಣ್ಯ ಪ್ರಸಾದ್ ಕೆ ಎಸ್, ವಿಜಿತ್ ಸಿ ಎಚ್, ಯಶಸ್ ಕೆ ಭಂಡಾರಿ, ಯಶಸ್ವಿನಿ ಕೆ ಈ ಸಾಧನೆಯನ್ನು ಪ್ರದರ್ಶಿಸಿದ್ದಾರೆ. ಪ್ರಸ್ತುತ ಶಾಲೆಯಲ್ಲಿ 141 ಮಂದಿ ಪರೀಕ್ಷೆ ಬರೆದಿದ್ದು 139 ಮಂದಿ ಮುಂದಿನ ಹಂತಕ್ಕೆ ತೇರ್ಗಡೆ ಹೊಂದಿ ಶಾಲೆಗೆ 99% ಫಲಿತಾಂಶವನ್ನು ತಂದಿದ್ದಾರೆ. ಎಲ್ಲರಿಗೂ ಶುಭಾಶಯಗಳು...


19 February 2021

ಶ್ರೀಮತಿ ಲಕ್ಷ್ಮಿ ಅಮ್ಮ ಸ್ಮಾರಕ ಬಹುಮಾನ - ಧನ್ಯವಾದಗಳು

ಬೆಂಗಳೂರು
15-02-2021

ನಮ್ಮ ಮಾತೃ ಶ್ರೀಯವರಾದ ದಿ. ಕೋಳಾರಿ ಕೋರಿಕ್ಕಾರು ಕೃಷ್ಣ ಭಟ್ಟರ ಧರ್ಮಪತ್ನಿ, ದಿ. ಶ್ರೀಮತಿ ಲಕ್ಷ್ಮಿ ಅಮ್ಮನವರು ನಮ್ಮ ನ್ನಗಲಿ ಇಂದಿಗೆ ಐದು ತಿಂಗಳು. ಅವರಿಗೆ ದೊರೆತ ಅತ್ಯಲ್ಪ ಶಾಲಾ ಶಿಕ್ಷಣವನ್ನು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯು ನೀಡಿತ್ತು ಎಂಬುದು ಹೆಮ್ಮೆಯ ವಿಚಾರವಾಗಿದೆ.

ನಮ್ಮ ಮಾತೃಶ್ರೀಯವರು ನಮಗೆ ನೀಡಿದ ಆರಂಭಿಕ ಶಿಕ್ಷಣವೂ ಜೀವನ ಮೌಲ್ಯಗಳೂ ಅಳತೆಗೆ ನಿಲುಕದಷ್ಟು. ನಾವು ಏಳು ಜನ ಮಕ್ಕಳನ್ನು ಬಡತನ ಹಾಗೂ ಸೌಲಭ್ಯ ರಹಿತ ದಿನಗಳಾದ 1950-80ರ ದಶಕಗಳಲ್ಲಿ ಸ್ಪೂರ್ತಿ ಮತ್ತು ಉತ್ಸಾಹಗಳನ್ನು ತುಂಬಿ ಮುನ್ನಡೆಸಿದ ಅವರ ದಿವ್ಯ ಚೇತನಕ್ಕೆ ನಮ್ಮ ಅನಂತಾನಂತ ನಮನಗಳು.

1930-40ರ ದಶಕಗಳಲ್ಲಿ ಹೆಣ್ಣು ಮಕ್ಕಳ ಶಿಕ್ಷಣವು ಒಂದು ಕನಸಿನ ಮಾತು. ನಮ್ಮ ಮಾತಶ್ರೀ ಯವರೂ ಕೂಡಾ  ಶಿಕ್ಷಣ ವಂಚಿತರಾದ ಆ ಕಾಲದ‌ ಹೆಣ್ಣು ಮಕ್ಕಳಲ್ಲಿ ಒಬ್ಬರು. ಅವರ ಶಾಲಾ ಶಿಕ್ಷಣವು‌ 3ನೇ ತರಗತಿ‌ಯಿಂದ ಆರಂಭವಾಗಿ 6ನೇ ತರಗತಿಯಲ್ಲಿ ಕೊನೆಗೊಂಡಿತ್ತು. ತಮ್ಮ 13ನೇ ವಯಸ್ಸಿನಲ್ಲಿ ವಿವಾಹ ಜೀವನಕ್ಕೆ ಕಾಲಿರಿಸಿದ ಅವರು ಮತ್ತೆಂದೂ ಯಾವ ವಿಧವಾದ ವಿದ್ಯಾಭ್ಯಾಸವನ್ನೂ ಮುಂದುವರಿಸಲಾಗಲಿಲ್ಲ. ಹೀಗಿದ್ದೂ ತಮ್ಮ ಮಕ್ಕಳಿಗೆ ಶಿಕ್ಷಣದ ಮಹತ್ವವನ್ನು ಮನದಟ್ಟು ಮಾಡಿ ಅವರನ್ನು ಉನ್ನತ ಶಿಕ್ಷಣದತ್ತ ಮುನ್ನಡೆಸಿದರು. ತಮ್ಮ ಮಕ್ಕಳಲ್ಲದೆ ಕುಟುಂಬದ ಹಾಗೂ ಕುಟುಂಬೇತರ ಮಕ್ಕಳ ವಿದ್ಯಾಭ್ಯಾಸಕ್ಕೂ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಸಹಕರಿಸಿದ ಅವರ ದಿವ್ಯಾತ್ಮಕ್ಕೆ ಒಂದು ಕಿರು ಕಾಣಿಕೆಯಾಗಿ, ಅವರು ಕಲಿತ ಶಾಲೆಯಲ್ಲಿ 10ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿ (ಯರಿ)ಗೆ  ಒಂದು ನಗದು ಬಹುಮಾನವನ್ನು ಕೊಡಮಾಡಲು ತೀರ್ಮಾನಿಸಿದ್ದೇವೆ.

ನಮ್ಮ ಪೇಕ್ಷೆಯನ್ನು ಅಂಗೀಕರಿಸಿ‌ ಶ್ರೀಮತಿ ಲಕ್ಷ್ಮಿ ಅಮ್ಮ ಸ್ಮಾರಕ ಬಹುಮಾನವನ್ನು ಅನುಷ್ಠಾನಗೊಳಿಸಿದ ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ಆಡಳಿತ ಮಂಡಳಿ, ಮೂಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದಕ್ಕೆ ನಾವು ಆಭಾರಿಳು.

ಈ ಕಾರ್ಯದಲ್ಲಿ ನಮ್ಮ ಪರವಾಗಿ ಅಪೇಕ್ಷೆಯನ್ನು ಮಂಡಿಸಿ ಎಲ್ಲಾ ವಿಧವಾದ ಸಹಕಾರವನ್ನೂ ನೀಡಿದ ನಮ್ಮ ಸೋದರ ಸಂಬಂಧಿ ಮತ್ತು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ಅಧ್ಯಾಪಕರೂ ಆಗಿರುವ ಶ್ರೀ ಗೋವಿಂದ ಶರ್ಮ, ಕೋರಿಕ್ಕಾರು ಅವರಿಗೆ ನಮ್ಮೆಲ್ಲರ ಅಕ್ಕರೆಯ ಧನ್ಯವಾದಗಳು.


ಇಂತಿ,
ದಿ. ಕೋಳಾರಿ ಕೋರಿಕ್ಕಾರು  ಕೃಷ್ಣ ಭಟ್ ಮತ್ತು ಶ್ರೀಮತಿ ಲಕ್ಷ್ಮಿ ಅಮ್ಮ ನವರ ಮಕ್ಕಳ ಪರವಾಗಿ,


ಮಗಳು,




ಶ್ರೀಮತಿ ಡಾ. ಕೆ. ಸುಮಂಗಲಾ ಭಟ್
ಸಂಸ್ಥಾಪಕ ನಿರ್ದೇಶಕರು
ಡೆಕ್ಟ್ರಾಸ್ ಟೆಕ್ನಾಲಜೀಸ್
ಕೆಂಗೇರಿ,‌ ಬೆಂಗಳೂರು -560060.

01 October 2020

ಮೇಘಶ್ರೀ ವಿ. ಎಸ್ - ಮರುಮೌಲ್ಯಮಾಪನದ ಬಳಿಕ ಎಲ್ಲ ವಿಷಯಗಳಲ್ಲಿ ಎ+

 

2019-20 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶವು ಈಗಾಗಲೇ ಪ್ರಕಟವಾಗಿದ್ದು ನಮ್ಮ ಶಾಲೆಯ ಆಂಗ್ಲ ಮಾಧ್ಯಮ ವಿಭಾಗದ ವಿದ್ಯಾರ್ಥಿನಿ ಮೇಘಶ್ರೀ ವಿ. ಎಸ್ ಮರುಮೌಲ್ಯಮಾಪನದ ಬಳಿಕ ಎಲ್ಲ ವಿಷಯಗಳಲ್ಲಿ ಎ+ ಪಡೆದಿದ್ದಾಳೆ. ಪರೀಕ್ಷೆಯ ಫಲಿತಾಂಶ ಪ್ರಕಟವಾದಾಗ ಒಂದು ವಿಷಯದಲ್ಲಿ ಹೊರತು ಪಡಿಸಿ ಉಳಿದ ಎಲ್ಲ ವಿಷಯಗಳಲ್ಲಿ ಎ+ ಗ್ರೇಡ್ ಪಡೆದಿದ್ದಳು. ಅರ್ಹವಾಗಿ ದೊರಕಬೇಕಾಗಿದ್ದ ವಿಷಯದಲ್ಲಿ ಎ+ ದೊರಕದೆ ಇದ್ದುದರಿಂದ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಇದೀಗ ಮರುಮೌಲ್ಯಮಾಪನದ ಫಲಿತಾಂಶವು ಪ್ರಕಟವಾಗಿದ್ದು ಈ ಮೂಲಕ ನಮ್ಮ ಶಾಲೆಯ ಒಟ್ಟು 20 ಮಂದಿ ಎಲ್ಲ ವಿಷಯಗಳಲ್ಲಿ ಎ+ ಪಡೆದು ಶಾಲೆಯ ಅಭಿಮಾನವನ್ನು ಹೆಚ್ಚಿಸಿದ್ದಾರೆ.

ಮೇಘಶ್ರೀ ವಿ. ಎಸ್ ನಮ್ಮ ಶಾಲೆಯ ನಿವೃತ್ತ ಶಿಕ್ಷಕ ವಜ್ರಾಂಗಿ ಈಶ್ವರ ಭಟ್ಟರ ಮೊಮ್ಮಗಳು. ನಮ್ಮ ಶಾಲೆಯ ಪೂರ್ವ ವಿದ್ಯಾರ್ಥಿ ಸುಬ್ರಹ್ಮಣ್ಯೇಶ್ವರ ಶರ್ಮ.ವಿ ಮತ್ತು ಆಶಾ ಟಿ.ಎಸ್ ದಂಪತಿಯ ಪುತ್ರಿ.

ಅಭಿನಂದನೆಗಳು...

30 June 2020

ನಮ್ಮ ಶಾಲೆಯ 19 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+


2019-20ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ನಮ್ಮ ಶಾಲೆಯ 19 ಮಂದಿ ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲಿ ಎ+ ಗ್ರೇಡ್ ಪಡೆದಿದ್ದಾರೆ. ಅದಿತಿ.ಕೆ, ಅಕ್ಷಿತ, ಅಮೃತ್ ರಾಜ್.ಎನ್, ಅನನ್ಯ. ಡಿ.ಕೆ, ಅನಿರುದ್ಧ್ ಪಿ.ವಿ., ಚಿನ್ಮಯಿ. ಸಿ.ಎಚ್, ದೀಪ್ನಾ.ಜೆ, ದಿಶಾಂತ್.ಕೆ, ದಿವ್ಯಾ.ಕೆ, ಕಾರ್ತಿಕ ಕೃಷ್ಣ.ಕೆ, ಕಾವ್ಯಶ್ರೀ.ಎನ್.ಜಿ, ಲೋಹಿತ್.ಪಿ.ಕೆ, ಮನ್ವಿತಾ.ಎನ್.ಪಿ., ನವ್ಯಶ್ರೀ ಎನ್.ಜಿ, ಪ್ರಗತಿ, ಶ್ರೇಯಾ ಆರ್. ನಾಯಕ್, ಶ್ರೇಯಶ್ರೀ.ಎನ್, ಸ್ಫೂರ್ತಿ ಭಟ್.ಕೆ, ಸುಶ್ಮಿತಾ.ಪಿ ಈ ಸಾಧನೆಯನ್ನು ಪ್ರದರ್ಶಿಸಿದ್ದಾರೆ. ಶಾಲೆಯಲ್ಲಿ 166 ಮಂದಿ ಪರೀಕ್ಷೆ ಬರೆದಿದ್ದು 165 ಮಂದಿ ಮುಂದಿನ ಹಂತಕ್ಕೆ ತೇರ್ಗಡೆ ಹೊಂದಿ ಶಾಲೆಗೆ 99.4% ಫಲಿತಾಂಶವನ್ನು ತಂದಿದ್ದಾರೆ. ಎಲ್ಲರಿಗೂ ಶುಭಾಶಯಗಳು...

06 May 2019

ನಮ್ಮ ಶಾಲೆಯ 8 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+




2018-19ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ನಮ್ಮ ಶಾಲೆಯ 8 ಮಂದಿ ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲಿ ಎ+ ಗ್ರೇಡ್ ಪಡೆದಿದ್ದಾರೆ. ಈ ಶಾಲೆಯ ಅಭಿರಾಮ.ಪಿ, ಅಪರ್ಣ.ಎಸ್, ಆಶಾ.ಕೆ, ಕೃಪೇಶ್.ಎ, ಪ್ರಶಾಂತ್.ವಿ, ಶಮಾ.ಎ, ಶರಣ್ಯ ಪಿ.ಜೆ, ವರಲಕ್ಷ್ಮಿ.ಎನ್  ಈ ಸಾಧನೆಯನ್ನು ಪ್ರದರ್ಶಿಸಿದ್ದಾರೆ. ಪ್ರಸ್ತುತ ಶಾಲೆಯಲ್ಲಿ 180 ಮಂದಿ ಪರೀಕ್ಷೆ ಬರೆದಿದ್ದು 172 ಮಂದಿ ಮುಂದಿನ ಹಂತಕ್ಕೆ ತೇರ್ಗಡೆ ಹೊಂದಿ ಶಾಲೆಗೆ 96% ಫಲಿತಾಂಶವನ್ನು ತಂದಿದ್ದಾರೆ. ಶುಭಾಶಯಗಳು...

25 February 2019

‘ಮಹಾಜನ ವಾಣಿ’ ವಾರ್ಷಿಕ ಸಮಾರೋಪ


"ಉತ್ತಮ ವರದಿಗಾರನೊಬ್ಬನಿಗೆ ಭೂತ ಭವಿಷ್ಯ ವರ್ತಮಾನಗಳ ಕಲ್ಪನೆಯಿದ್ದು ವರದಿಗಾರಿಕೆಯಲ್ಲಿ ತನ್ನತನವನ್ನು ಬೆಳೆಸಿಕೊಂಡರೆ ಉಜ್ವಲಭವಿಷ್ಯ ಕಂಡುಕೊಳ್ಳಬಹುದು"ಎಂದು ವಿಜಯವಾಣಿ ಪತ್ರಿಕೆಯ ವರದಿಗಾರ ಪುರುಷೋತ್ತಮ ಭಟ್ ಪುದುಕೋಳಿ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯ ವಿದ್ಯಾರ್ಥಿಗಳಿಂದ ಮಧ್ಯಾಹ್ನದ ಶಾಲಾ ಅವಧಿಯ ಸದುಪಯೋಗಕ್ಕಾಗಿ ಪ್ರಸಾರವಾಗುವ ‘ಮಹಾಜನವಾಣಿ’ ಎಂಬ ರೇಡಿಯೋ ಕಾರ್ಯಕ್ರಮದ ಸಮಾಪನ ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಮಾತನಾಡುತ್ತಿದ್ದರು. ಸಭೆಯ ಅಧ್ಯಕ್ಷತೆಯನ್ನು ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ವಹಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ವೆಂಕಟರಾಜ ಸಿ. ಯಚ್ ಹಾಗು ಹಿರಿಯ ಅಧ್ಯಾಪಿಕೆಯಾದ ಶ್ರೀಮತಿ  ವಾಣಿ ಪಿ.ಯಸ್ ವೇದಿಕೆಯಲ್ಲಿದ್ದರು. ವಿದ್ಯಾರ್ಥಿಗಳಾದ ಹರ್ಷಿತ ಸ್ವಾಗತಿಸಿ ಕೃಪಾನಿಧಿ.ಕೆ ವಂದಿಸಿದರು. ವಿದ್ಯಾರ್ಥಿನಿಯರಾದ ಅದಿತಿ.ಕೆ ಮತ್ತು ಅನುಪ್ರಿಯ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಭಾಷಾ ಅಧ್ಯಾಪಕರಾದ ವಿಶ್ವನಾಥ ಭಟ್, ನಂದಕುಮಾರ, ಶ್ರೀಮತಿ ಅನ್ನಪೂರ್ಣ, ಶ್ರೀಮತಿ ಶೈಲಜಾ. ಎ, ಶ್ರೀಮತಿ ಗಾಯತ್ರಿ, ಶ್ರೀಮತಿ ಸುನಿತಾ ಮೊದಲಾದವರು ಮಕ್ಕಳನ್ನು ರೇಡಿಯೋ ಕಾರ್ಯಕ್ರಮಗಳಿಗೆ ತರಬೇತುಗೊಳಿಸಿ ಸಹಕರಿಸಿದರು.

22 February 2019

ಸ್ಪಂದನ - 2019


“ಕಷ್ಟಗಳು ನಮ್ಮನ್ನು ಸದಾ ಕಾಡುತ್ತಿರುತ್ತವೆ. ಆದರೆ ನಾವು ಆ ಕಷ್ಟಗಳು ಎದುರಾದಾಗ ಧೃತಿಗೆಡಬಾರದು ಮತ್ತು ಇತರರ ಕಷ್ಟವನ್ನು ಅರಿತು ಅವರಿಗೆ ಸ್ಪಂದಿಸಿ ಸಹಾಯ ಮಾಡಬೇಕು ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಕಿರಣ್ ಪ್ರಸಾದ್ ಕೂಡ್ಲು  ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ಜರಗಿದ ’ಸ್ಪಂದನ’ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಉದಾರ ದಾನಿಗಳ ಸಹಕಾರದಿಂದ ಅಶಕ್ತ ವಿದ್ಯಾರ್ಥಿಯ ಕುಟುಂಬಕ್ಕೆ ನೀಡಲು ಸಂಗ್ರಹಿಸಿದ ಮೊತ್ತವನ್ನು ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಸ್.ನಾರಾಯಣ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕುಂಬಳೆ ಲೋಕಲ್ ಅಸೋಸಿಯೇಷನ್ ಕಾರ್ಯದರ್ಶಿ ವಿಜಯ ಕುಮಾರ್, ಮಂಜೇಶ್ವರ ಲೋಕಲ್ ಅಸೋಸಿಯೇಷನ್ ಕಾರ್ಯದರ್ಶಿ ಶಿವಪ್ರಸಾದ್, ಕಾಸರಗೋಡು ಬುಲ್‌ಬುಲ್ ಹೆಡ್‌ಕ್ವಾರ್ಟರ್ಸ್ ನಾಯಕಿ ಶ್ರೀಮತಿ ಜ್ಯೋತಿಲಕ್ಷ್ಮಿ, ಮಂಜೇಶ್ವರ ಎಡಿಸಿ ಶ್ರೀಮತಿ ಶ್ರೀಕುಮಾರಿ, ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ, ಶಾಲಾ ಸ್ಕೌಟ್ ಅಧ್ಯಾಪಕರಾದ ಶಿವರಂಜನ್.ಪಿ.ಆರ್, ಅವಿನಾಶ ಕಾರಂತ.ಎಂ, ಗೈಡ್ಸ್ ಶಿಕ್ಷಕಿ ಶ್ರೀಮತಿ ಅನ್ನಪೂರ್ಣ.ಎಸ್  ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಕಾರ್ತಿಕ ಕೃಷ್ಣ.ಕೆ ಸ್ವಾಗತಿಸಿ, ಅದಿತಿ.ಕೆ ವಂದಿಸಿದರು. ಪ್ರಗತಿ.ಕೆ ಕಾರ್ಯಕ್ರಮವನ್ನು ನಿರೂಪಿಸಿದರು.

13 February 2019

ಕಲಿಕೋತ್ಸವ



“ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಹಲವಾರು ಹೊಸ ವಿಚಾರಗಳನ್ನು ಕಲಿತಿರುತ್ತಾರೆ. ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ಈ ಚಟುವಟಿಕೆಗಳು ಸಹಕಾರಿಯಾಗುತ್ತವೆ. ಭವಿಷ್ಯದಲ್ಲಿ ಸಮಾಜದ ಹಲವು ರಂಗಗಳಲ್ಲಿ ಮಿಂಚಲಿರುವ ಈ ಮಕ್ಕಳಿಗೆ ಶಾಲೆಯಲ್ಲಿ ಜರಗುವ ಹಲವು ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ. ಕಲೆ, ಕ್ರೀಡೆ, ವೃತ್ತಿಶಿಕ್ಷಣ ಇತ್ಯಾದಿ ರಂಗಗಳಲ್ಲಿ ಹೆಚ್ಚಿನ ತರಬೇತಿ ನೀಡುವ ಶಿಕ್ಷಣ ವ್ಯವಸ್ಥೆ ಕೇರಳದಲ್ಲಿ ಇರುವುದರಿಂದ ಮಕ್ಕಳು ಬಹುಮುಖಿಯಾದ ವಿಕಾಸವನ್ನು ಅವರ ಜೀವನದಲ್ಲಿ ಕಂಡುಕೊಳ್ಳುತ್ತಿದ್ದಾರೆ. ಈ ವಿದ್ಯಾರ್ಥಿಗಳ ಕಲಿಕೆಯ ಸಾಧನೆಗಳನ್ನು ಪ್ರದರ್ಶಿಸುವ ವೇದಿಕೆಯಾಗಿ ಕಲಿಕೋತ್ಸವ ಮೂಡಿಬಂದಿದೆ.” ಎಂದು ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಡಿ.ಶಂಕರ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ಜರಗಿದ ’ಕಲಿಕೋತ್ಸವ’ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ, ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಸ್.ನಾರಾಯಣ, ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ, ಬಿ.ಆರ್.ಸಿ ಕೋರ್ಡಿನೇಟರ್ ಮಮತಾ.ಪಿ ಶುಭಹಾರೈಸಿದರು. ಅಧ್ಯಾಪಕರಾದ ಮಾಲತಿ.ಪಿ, ಜ್ಯೋತಿಲಕ್ಷ್ಮಿ.ಎಸ್, ಅವಿನಾಶ ಕಾರಂತ.ಎಂ, ಪೂರ್ಣಿಮ.ಟಿ, ರೋಹಿಣಿ.ಎಸ್, ಶೋಭಾ.ಕೆ.ಹಿರೇಮಠ, ನಂದಕುಮಾರ.ಕೆ, ಸಂತೋಷ್.ಪಿ.ಎಚ್. ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕೆ.ಆರ್.ಸ್ವಾತಿ ಸ್ವಾಗತಿಸಿ, ಪ್ರಜಿತ್.ಪಿ.ರೈ ವಂದಿಸಿದರು. ವರದರಾಜ್. ಕೆ.ಆರ್ ಮತ್ತು ಆಕಾಶ್.ಎಸ್ ಕಾರ್ಯಕ್ರಮವನ್ನು ನಿರೂಪಿಸಿದರು.

ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ವಿಜ್ಞಾನ, ಕನ್ನಡ, ಇಂಗ್ಲೀಷ್, ಹಿಂದಿ, ಸಂಸ್ಕೃತ, ಗಣಿತ, ಸಮಾಜ, ವೃತ್ತಿ ಪರಿಚಯ ಮತ್ತು ಕಲೆಗೆ ಸಂಬಂಧಿಸಿದ ವಿವಿಧ ಪ್ರಾಯೋಗಿಕ ಚಟುವಟಿಕೆಗಳು ಮತ್ತು ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದರು. ವಿದ್ಯಾರ್ಥಿಗಳ ರಕ್ಷಕರು ಕಾರ್ಯಕ್ರಮಕ್ಕೆ ಆಗಮಿಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದರು.

30 January 2019

ವರ್ಧಂತ್ಯುತ್ಸವ 2019



“ವಿದ್ಯಾರ್ಥಿಗಳು ಎಳವೆಯಲ್ಲಿಯೇ ಮೊಬೈಲುಗಳ ದಾಸರಾಗಿ ತಮ್ಮ ಗುರಿಯಿಂದ ವಿಚಲಿತರಾಗುತ್ತಿರುವುದು ಹೊಸ ದುರಂತ. ಕಂಪ್ಯೂಟರು ಮತ್ತು ಮೊಬೈಲುಗಳು ಆಧುನಿಕ ಜಗತ್ತಿನ ಕೊಡುಗೆ. ಅವುಗಳನ್ನು ಸಮರ್ಪಕವಾಗಿ ಉಪಯೋಗಿಸಿದರೆ ಮಾತ್ರ ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳಲು ಸಾಧ್ಯ. ಈ ಗುರಿಯಿಂದ ವಿಚಲಿತರಾದರೆ ಭವಿಷ್ಯದ ಹಾದಿ ದುರ್ಗಮವಾಗುವುದು. ಆದ್ದರಿಂದ ಉತ್ತಮ ಪ್ರಜೆಗಳಾಗಿ ಬೆಳಗಬೇಕಾದ ವಿದ್ಯಾರ್ಥಿಗಳು ನವ ಸಂವಹನಾ ಮಾಧ್ಯಮಗಳು ಉಂಟುಮಾಡಬಹುದಾದ ಅಪಾಯಗಳ ಬಗ್ಗೆ ಜಾಗೃತರಾಗಿ ತಮ್ಮ ಅಧ್ಯಯನದ ಕಡೆಗೆ ಏಕಾಗ್ರಚಿತ್ತರಾಗಬೇಕು” ಎಂದು ನಿವೃತ್ತ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ಜರಗಿದ ವರ್ಧಂತ್ಯುತ್ಸವದ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಸ್.ನಾರಾಯಣ ಹಾಗೂ ಮಾತೃ ಸಂಘದ ಅಧ್ಯಕ್ಷೆಯರಾದ ಶ್ರೀಮತಿ ಪುಷ್ಪಲತಾ ಮತ್ತು ಶ್ರೀಮತಿ ಪಾವನಾ ಮಹೇಶ್ ಶುಭಹಾರೈಸಿದರು. ಈ ವರ್ಷ ಸೇವೆಯಿಂದ ನಿವೃತ್ತರಾಗಲಿರುವ ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಎಚ್.ಎನ್.ಮೀನಾಕ್ಷಿ ಇವರಿಗೆ ಶಾಲಾ ರಕ್ಷಕ ಶಿಕ್ಷಕ ಸಂಘದ ವತಿಯಿಂದ ಗೌರವ ಸಲ್ಲಿಸಲಾಯಿತು. ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಪಿ.ಎ.ಕೃಷ್ಣಯ್ಯ ಬಹುಮಾನಗಳನ್ನು ವಿತರಿಸಿದರು.

ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲಾ ಮುಖ್ಯೋಪಾಧ್ಯಾಯ ವೆಂಕಟರಾಜ ಸಿ.ಎಚ್ ವರದಿ ವಾಚಿಸಿದರು. ಮಹಾಜನ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಜಯದೇವ ಖಂಡಿಗೆ ಸ್ವಾಗತಿಸಿದರು. ಹೈಯರ್ ಸೆಕೆಂಡರಿ ವಿಭಾಗದ ಪ್ರಾಂಶುಪಾಲ ಶಿವಪ್ರಕಾಶ್.ಎಂ.ಕೆ ವಂದಿಸಿದರು. ಶಿಕ್ಷಕಿ ಶ್ರೀಮತಿ ಸರಿತಾ ಪಿ.ಎಸ್ ಕಾರ್ಯಕ್ರಮವನ್ನು ನಿರೂಪಿಸಿದರು.