Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

31 March 2009

ಚಿತ್ರ ೧೧ - ಗಣೇಶ. ಎಂ.


ಇಂದಿನಿಂದ ನಮಗೂ ವಿದ್ಯಾರ್ಥಿಗಳಿಗೂ ಬೇಸಿಗೆ ರಜಾ. ಕೆಲವರು ಈ ವಿಮಾನದಲ್ಲಿ ಪ್ರವಾಸ ಹೊರಟಿದ್ದಾರೆ ಅಜ್ಜನ ಮನೆಗೆ, ಬೀಜದ ಗುಡ್ಡೆಗೆ. ಹಲಸು ಮಾವುಗಳ ಲೋಕಕ್ಕೆ. ಗಣೇಶ ಎಂ. ಬಿಡಿಸಿದ ಈ ಚಿತ್ರವನ್ನು ಈ ಸಂದರ್ಭಕ್ಕಾಗಿಯೇ ವಿಶೇಷವಾಗಿ ಆಯ್ಕೆ ಮಾಡಿದ್ದೇವೆ.

29 March 2009

ಚಿತ್ರ ೧೦ - ಶಿಲ್ಪಾ. ಎಂ


ಇಂದು ಭಾನುವಾರ ಶಾಲೆಗೆ ರಜಾದಿನ. ಇನ್ನೆರಡು ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಬೇಸಿಗೆ ರಜಾ ಆರಂಭವಾಗುತ್ತದೆ. ವಸಂತನ ಆಗಮನದ ಸಂದರ್ಭದಲ್ಲಿ ನಿಮ್ಮೆದುರು ಶಿಲ್ಪಾ ಬಿಡಿಸಿದ ಚಿತ್ರವನ್ನು ಇಡುತ್ತಿದ್ದೇವೆ.

27 March 2009

ಪ್ರತಿಭೆ ೦೫ - ನಮೃತಾ ಎಂ.ಎಸ್



ಈ ಬಾರಿ ಪ್ರತಿಭೆ ಅಂಕಣದಲ್ಲಿ ಬೆಳಕಿಗೆ ಬರುತ್ತಿರುವುದು ನಮೃತಾ ಎಂ.ಎಸ್ ಭಾವಚಿತ್ರ. ಈಕೆಯ ಕಲಾರಚನೆಗಳನ್ನು ನೀವೆಲ್ಲಾ ನೋಡಿರಬಹುದು. ಅನೇಕರು ಅವುಗಳನ್ನು ಮೆಚ್ಚಿಕೊಂಡಿದ್ದಾರೆ. ಹತ್ತನೇ ತರಗತಿಯಲ್ಲಿ ಕಲಿಯುತ್ತಿರುವ ಈಕೆ ಓದು, ಚಿತ್ರ ರಚನೆ, ಹಾಡುಗಾರಿಕೆಯಲ್ಲಿ ಯಾವತ್ತೂ ಮುಂದಿರುತ್ತಾಳೆ. ನಮೃತಾ ಮತ್ತು ತಂಡದ ಇತರ ಸದಸ್ಯರು ಕಳೆದ ವರ್ಷ ಕೇರಳ ರಾಜ್ಯ ಮಟ್ಟದಲ್ಲಿ ವಂದೇಮಾತರಂ ಹಾಡಿ ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಈಕೆ ನಮ್ಮ ಶಾಲಾ ಸಂಸ್ಕೃತ ಶಿಕ್ಷಕ ಎಸ್.ವಿ.ಭಟ್ ಮತ್ತು ಜಯಶ್ರೀ ದಂಪತಿಗಳ ಪುತ್ರಿ. ಈಕೆಯ ಅಣ್ಣ ನವೀನ ಬೆಂಗಳೂರಿನಲ್ಲಿದ್ದಾನೆ.

26 March 2009

ಕಥೆ ೦೭ - ಮೊದಲ ಬಾರಿ ಹಂದಿ ನೋಡಿದ ಬಗೆ

-ಅಜೇಯಕೃಷ್ಣ. ಕೆ

ಆಗ ನಾನು ಮೂರನೇ ತರಗತಿ. ಆಗ ರಾತ್ರಿ ಹೊತ್ತಿನಲ್ಲಿ ನಮ್ಮ ತೋಟಕ್ಕೆ ಕಾಡುಹಂದಿಗಳು ಬರುವುದು ಸಾಮಾನ್ಯವಾಗಿತ್ತು. ಮನೆಯ ನಾಯಿಯೂ ಬೊಗಳುತ್ತಿತ್ತು. ನನ್ನ ತಂದೆ ಲೈಟು ಹಿಡಿದು ತೋಟಕ್ಕೆ ಹೋಗುತ್ತಿದ್ದರು. ಮರುದಿನ ಬೆಳಗ್ಗೆ ತಂದೆ ನನ್ನಲ್ಲಿ ಅದರ ಬಗ್ಗೆ ಹೇಳುತ್ತಿದ್ದರು. ಇದರಿಂದಾಗಿ ಹಂದಿ ನೋಡಬೇಕೆಂಬ ನನ್ನ ಆಸೆ ಹೆಚ್ಚಿತು. ಆ ದಿನ ರಾತ್ರಿ ನಾವಿಬ್ಬರೂ ಜತೆಯಾಗಿ ತೋಟಕ್ಕೆ ಹೋದೆವು. ಲೈಟಿನ ಬೆಳಕಿಗೆ ಹಂದಿಗಳ ಹಿಂಡು ಚದುರಿ ಓಡತೊಡಗಿದವು. ಓಡುವ ರಭಸಕ್ಕೆ ದಾರಿಯಲ್ಲಿದ್ದ ಕಲ್ಲು ಬಾವಿಗೆ ಬಿತ್ತು. ಆಗ ಹೆದರಿ ನಾನು ಮನೆಗೆ ಓಡಿದ ನೆನಪು ಇನ್ನೂ ಹಸಿರಾಗಿದೆ.

24 March 2009

ಪ್ರತಿಭಾನ್ವಿತರು ೦೪ - ಅನುಪಮ ಪಿ.ಎಸ್


ಪ್ರಸ್ತುತ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುತ್ತಿರುವ ಅನುಪಮ ಪಿ.ಎಸ್. ಪ್ರತಿಭಾನ್ವಿತ ಹುಡುಗಿ. ಭರತನಾಟ್ಯದಲ್ಲಿ ಸೀನಿಯರ್ ಪದವಿ, ಮಹಾಭಾರತ ಪರೀಕ್ಷೆಯಲ್ಲಿ ೯೨% ಅಂಕ, ಸುಗಮ ಹಿಂದೀ ಪರೀಕ್ಷೆಯಲ್ಲಿ ೯೪% ಅಂಕ ಅವಳ ಪ್ರತಿಭೆಯ ಕೈಗನ್ನಡಿ. ಕೇರಳ ರಾಜ್ಯ ಸರಕಾರದ ವತಿಯಿಂದ ವನ್ಯಜೀವಿ ಸಪ್ತಾಹದ ಅಂಗವಾಗಿ ಜಿಲ್ಲಾ ಮಟ್ಟದಲ್ಲಿ ನಡೆಸಲ್ಪಟ್ಟ ಪ್ರಬಂಧ ಸ್ಪರ್ಧೆಯಲ್ಲಿ ಸತತ ಎರಡು ಬಾರಿ ಪ್ರಶಸ್ತಿ ಪಡೆದುಕೊಂಡಿದ್ದಾಳೆ. ಉಪಜಿಲ್ಲಾ ಮಟ್ಟದ ಕಲೋತ್ಸವದ ಅಂಗವಾಗಿ ಜರಗಿದ ಸ್ಪರ್ಧೆಯಲ್ಲಿ ಭರತನಾಟ್ಯ, ಮೋಹಿನಿಯಾಟ್ಟಂಗಳಲ್ಲಿ ಪ್ರಥಮ ಬಹುಮಾನ, ಇಂಗ್ಲೀಷ್ ಪ್ರಬಂಧದಲ್ಲಿ ದ್ವಿತೀಯ ಸ್ಥಾನ ಅವಳ ಪ್ರತಿಭೆಯನ್ನು ಹೊರಹೊಮ್ಮಿಸಿವೆ. ವಿದ್ಯಾರಂಗಂ ಆಶ್ರಯದಲ್ಲಿ ಜರಗಿದ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ. ಕೇರಳ ರಾಜ್ಯ ಸರಕಾರ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ನಡೆಸುವ ‘ದ ಎಕ್ಸಲೆನ್ಸ್ ಪ್ರೊಮೋಷನ್ ಓಫ್ ಗಿಫ್ಟೆಡ್ ಚಿಲ್ಡ್ರನ್’ ಪ್ರತ್ಯೇಕ ತರಗತಿಗಳಿಗೆ ಕಳೆದ ಮೂರು ವರ್ಷಗಳಿಂದ ಹಾಜರಾಗುತ್ತಿದ್ದಾಳೆ. ಹಿರಿಯ ಸಂಗೀತ ವಿದುಷಿ ಶ್ರೀಮತಿ ಉಷಾ ಈಶ್ವರ ಭಟ್ ಅವರ ಬಳಿ ಸಂಗೀತ ಮತ್ತು ‘ನಾಟ್ಯನಿಲಯಂ’ ಬಾಲಕೃಷ್ಣ ಮಂಜೇಶ್ವರ ಇವರಿಂದ ನೃತ್ಯ ಅಭ್ಯಾಸ ಮಾಡಿಕೊಳ್ಳುತ್ತಿದ್ದಾಳೆ. ಓದಿನಲ್ಲೂ ಮುಂದಿದ್ದಾಳೆ. ಈಕೆ ಕಲ್ಲಕಟ್ಟ ಎಂ.ಎ.ಯು.ಪಿ. ಶಾಲೆಯ ಅಧ್ಯಾಪಕ ದಂಪತಿ ಶಿವರಾಮ ಪಿ.ವಿ ಮತ್ತು ಜಯಲಕ್ಷ್ಮಿ.ಸಿ.ಎಚ್ ಇವರ ಪುತ್ರಿ. ‘ಮಹಾಜನ’ದಲ್ಲಿ ಅನುಪಮಾ ಬರೆದ ಪ್ರಬಂಧಗಳನ್ನು ಎದುರು ನೋಡುತ್ತಿದ್ದೇವೆ.

23 March 2009

ಗೀತೆಯ ಸಾರ

ಆದದ್ದೆಲ್ಲಾ ಒಳ್ಳೆಯದಕ್ಕೇ ಆಗಿದೆ
ಆಗುವುದೆಲ್ಲಾ ಒಳ್ಳೆಯದೇ ಆಗುತ್ತಿದೆ
ಆಗಲಿರುವುದು,
ಅದೂ ಒಳ್ಳೆಯದೇ ಆಗಲಿದೆ.
ರೋದಿಸಲು ನೀನೇನು ಕಳಕೊಂಡಿರುವೆ
ಕಳಕೊಳ್ಳಲು
ನೀನು ತಂದಿರುವುದಾದರೂ ಏನು.
ನಾಶವಾಗಲು
ನೀನು ಮಾಡಿರುವುದಾದರೂ ಏನು.
ನೀನೇನು ಪಡೆದಿದ್ದರೂ
ಅದನ್ನು ಇಲ್ಲಿಂದಲೇ ಪಡೆದಿರುವೆ.
ಏನನ್ನು ನೀಡಿದ್ದರೂ
ಅದನ್ನು ಇಲ್ಲಿಗೇ ನೀಡಿರುವೆ.
ನಿನ್ನೆ ಬೇರಾರದ್ದೋ ಆಗಿದ್ದದ್ದು
ಇಂದು ನಿನ್ನದಾಗಿದೆ,
ಮತ್ತು ನಾಳೆ ಇನ್ಯಾರದ್ದೋ ಆಗಲಿದೆ.

ಪರಿವರ್ತನೆ ಜಗದ ನಿಯಮ

21 March 2009

ಕಥೆ ೦೬ - ಪಶ್ಚಾತ್ತಾಪಪಟ್ಟ ರವಿ

-ಲತಾಶಂಕರಿ. ಕೆ.ಎ
ಒಂದೂರಿನಲ್ಲಿ ರಾಮಣ್ಣ ಎಂಬ ರೈತನೊಬ್ಬನು ಅವನ ಪತ್ನಿ ಸೀತಕ್ಕನೊಂದಿಗೆ ಬಹಳ ಸುಖ ಸಂತೋಷಗಳೊಂದಿಗೆ ಜೀವಿಸುತ್ತಿದ್ದನು. ರವಿಯು ಅವರ ಒಬ್ಬನೇ ಮಗನಾಗಿದ್ದನು. ಆದುದರಿಂದ ತಂದೆ-ತಾಯಿ ಅವನನ್ನು ತುಂಬಾ ಪ್ರೀತಿಯಿಂದ ಬೆಳೆಸುತ್ತಿದ್ದರು, ಶಾಲೆಗೂ ಸೇರಿಸಿದರು. ಅವನು ಕಲಿತು ದೊಡ್ಡವನಾದನು. ಒಂದು ದಿನ ರವಿಯು ಯಾರಿಗೂ ತಿಳಿಯದಂತೆ ಮನೆಯಿಂದ ೫೦ ರೂ. ತೆಗೆದುಕೊಂಡನು. ಹೇಗೋ ವಿಷಯ ತಿಳಿದ ತಂದೆಗೆ ತುಂಬಾ ಸಿಟ್ಟು ಬಂತು. ಅವರು ಮಗನನ್ನು ಬೈದರು. ಇದರಿಂದ ಬೇಸರಪಟ್ಟುಕೊಂಡ ರವಿ ಮನೆ ಬಿಟ್ಟು ಹೋದನು. ಬೇರೆ ಕಡೆ ಮನೆ ಕಟ್ಟಿ ಲಕ್ಷ್ಮಿ ಎಂಬವಳನ್ನು ಮದುವೆಯಾಗಿ ಹುಟ್ಟಿದ ಮಗನಿಗೆ ರಾಜು ಎಂದು ಹೆಸರಿಟ್ಟನು. ಶಾಲೆಗೆ ಹೋಗುತ್ತಿದ್ದ ರಾಜು ಒಂದು ದಿನ ಮನೆಯಿಂದಲೇ ೧೦ ರೂ. ಕದ್ದು ಅಪ್ಪನ ಕೈಗೆ ಸಿಕ್ಕಿಬಿದ್ದನು. ಬೇಸರ ಪಟ್ಟುಕೊಂಡ ರಾಜುವೂ ಮನೆಬಿಟ್ಟು ಹೊರಟುಹೋದನು. ರವಿಗೆ ಹಳೆಯ ಕಥೆಗಳೆಲ್ಲ ನೆನಪಾದವು. ತಾನು ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಟ್ಟುಕೊಂಡನು.

18 March 2009

ಚಿತ್ರ ೦೯ - ನಮೃತಾ. ಎಂ. ಎಸ್

ನಮೃತಾ ಎಸ್. ಎಸ್. ಎಲ್. ಸಿ. ಪರೀಕ್ಷೆ ಬರೆಯುತ್ತಿದ್ದಾಳೆ. ಅವಳಿಗೆ ಶುಭಾಶಯಗಳು. ಒಂದು ತಿಂಗಳು ಕಳೆದರೆ ಅವಳೂ ಹಳೆವಿದ್ಯಾರ್ಥಿಯಾಗುತ್ತಾಳೆ. ಚೆನ್ನಾಗಿ ಚಿತ್ರ ಬಿಡಿಸುವುದರಿಂದ ಈಗಲೇ ಅವಳು ಬಿಡಿಸಿದ ಚಿತ್ರಗಳನ್ನು ಉಪಯೋಗಿಸುತ್ತಿದ್ದೇವೆ.

17 March 2009

ಪೂರ್ವ ವಿದ್ಯಾರ್ಥಿಯ ನುಡಿನೋಟಗಳು.


ನಮ್ಮ ಶಾಲಾ ಹಳೆವಿದ್ಯಾರ್ಥಿ, ಕಾಸರಗೋಡಿನ ‘ಕಾರವಲ್’ ಸಂಜೆ ದೈನಿಕದ ಸುದ್ದಿ ಸಂಪಾದಕ ಎಂ. ನಾರಾಯಣ ಚಂಬಲ್ತಿಮಾರ್ ಪುಸ್ತಕವೊಂದನ್ನು ಹೊಸೆದಿದ್ದಾರೆ. ಕೈರಳಿ ಪ್ರಕಾಶನ ಹೊರತಂದಿರುವ ‘ಚಂದ್ರಗಿರಿಯ ದಡದಿಂದ...’ ಎಂಬ ಈ ಪುಸ್ತಕವನ್ನು ಮುಂಬೈಯಲ್ಲಿ ಜರಗಿದ ಕಾಸರಗೋಡು ಉತ್ಸವದಲ್ಲಿ ಬಿಡುಗಡೆ ಮಾಡಿ ಬಂದಿದ್ದಾರೆ. ಊರ ಮಂದಿಯ ಭಾಗವಿಸುವಿಕೆಗಾಗಿ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡು ಘಟಕ ಮತ್ತು ಅನಂತಪುರದ ಪ್ರಕೃತಿ ಯುವ ತಂಡ ಜಂಟಿಯಾಗಿ ಮಾತಿನ ಮಂಟಪವನ್ನು ಮೊನ್ನೆ ಅನಂತಪುರದಲ್ಲಿ ಕಟ್ಟಿದ್ದವು. ಪುಸ್ತಕ ಚೆನ್ನಾಗಿದೆ. ಚಂಬಲ್ತಿಮಾರ್ ಅವರಿಗೆ ಶುಭಾಶಯಗಳು.

ಹರೀಶನಿಗೆ ಪಾಸಾಗಬೇಕು: ನಾಳೆಗಾಗಿ, ನಾಡಿಗಾಗಿ


ಪ್ರಸಕ್ತ ಎಸ್. ಎಸ್. ಎಲ್. ಸಿ ಪರೀಕ್ಷೆ ಬರೆಯುತ್ತಿರುವ, ಓದಿನಲ್ಲಿ ಅತ್ಯಂತ ಹಿಂದುಳಿದ ಆದಿವಾಸಿ ಕೊರಗ ಜನಾಂಗದ ಪ್ರಪ್ರಥಮ ಹುಡುಗ ಹರೀಶನ ಚಿತ್ರವನ್ನು ನಿಮ್ಮ ಮುಂದಿಡುತ್ತಿದ್ದೇವೆ. ಆತ ನಮ್ಮ ಶಾಲೆಯ ಹತ್ತು ‘ಡಿ’ ತರಗತಿಯ ವಿದ್ಯಾರ್ಥಿ. ತನ್ನ ಸಮುದಾಯಕ್ಕೆ ಆದರ್ಶವಾಗಿ ಎಸ್. ಎಸ್. ಎಲ್. ಸಿ ಪಾಸಾಗಬಲ್ಲ ವಿದ್ಯಾರ್ಥಿ. ನಮ್ಮ ವತಿಯಿಂದ ಆತನಿಗೆ ಅನಂತ ಶುಭಕಾಮನೆಗಳು. ಈ ಹಿಂದೆಯೇ ಮಲಯಾಳ ಮನೋರಮಾ ಪತ್ರಿಕೆ ನಮ್ಮ ಕುರಿತು ಬರೆದಿರುವುದನ್ನು ಹೇಳಿಕೊಂಡಿದ್ದೇವೆ. ಈ ಬಾರಿ ನಿಮ್ಮ ಮುಂದೆ ಮಲಯಾಳ ಮಾಧ್ಯಮಗಳ ‘ನ್ಯೂಸ್ ನೋಸ್’ ಎಷ್ಟು ಜಾಗರೂಕವಾಗಿರುತ್ತದೆ ಎಂಬುದನ್ನು ತೋರಿಸುವ ಉದ್ದೇಶದಿಂದ ಮತ್ತೆ ಮಲಯಾಳ ಮನೋರಮಾ ಪತ್ರಿಕೆಯನ್ನು ನಿಮ್ಮ ಮುಂದೆ ಹರವಿದ್ದೇವೆ. ಎಲ್ಲೋ ಸಿಕ್ಕಿದ ಚೂರು ಸುದ್ದಿಯೊಂದನ್ನು ಆಧಾರವಾಗಿರಿಸಿ ಹೊಸ ಸುದ್ದಿಯೊಂದನ್ನು ಹೊರತೆಗೆದಿದ್ದಾರೆ. ದೌರ್ಭಾಘ್ಯವೆಂದರೆ ನಮ್ಮ ಯಾವ ಕನ್ನಡ ಪತ್ರಿಕೆಗಳಿಗೂ ಹರೀಶನ ಸಾಧನೆ ಅತ್ಯಂತ ಅಪೂರ್ವವಾದದ್ದು ಎಂದು ಅರಿವಾಗಿರಲಿಲ್ಲ ಅನಿಸುತ್ತಿದೆ. ಮಲಯಾಳ ಮಾಧ್ಯಮಗಳಿಂದ ನಾವು ಕಲಿಯಬೇಕಾದ್ದು ಬೇಕಾದಷ್ಟಿದೆ ಎಂದು ಸ್ನೇಹಿತ ಮಹೇಶ ಪುಚ್ಚಪ್ಪಾಡಿ ಹೇಳಿದ್ದು ಸುಳ್ಳಲ್ಲ.

16 March 2009

ಉದಯವಾಣಿಯ ಬೆಳಕು

ಪ್ರತೀ ಸೋಮವಾರ ಹಿರಿಯ ತಂತ್ರಜ್ಞಾನ ಬರಹಗಾರ ಅಶೋಕ್ ಕುಮಾರ್ ಉದಯವಾಣಿಯ ಸಂಪದ ಪುಟದಲ್ಲಿ ನಿಸ್ತಂತು ಸಂಸಾರ ಅಂಕಣ ಬರೆಯುತ್ತಾರೆ. ಕಳೆದ ಸೋಮವಾರ ಆ ಅಂಕಣದ ಒಳಗೆ ಹೊಕ್ಕು ಕುಳಿತುಕೊಳ್ಳಲು ಈ ಪುಟ್ಟ ಬ್ಲಾಗಿಗೂ ಸಾಧ್ಯವಾಯಿತು ಎಂಬುದು ನಮ್ಮ ಮಟ್ಟಿಗೆ ತುಂಬಾ ಸಂತಸದ ವಿಚಾರ. ಬ್ಲಾಗನ್ನು ಇ-ಪತ್ರಿಕೆಯಾಗಿಸಿದ ನವೀನ ಪ್ರಯೋಗ ಎಂಬ ಉಲ್ಲೇಖ ಉತ್ಪ್ರೇಕ್ಷೆ ಆಗಿರಲಾರದು ಎಂಬ ವಿಶ್ವಾಸ ನಮಲ್ಲಿದೆ. ನಮಗೆ ಸಿಕ್ಕಿದ ಪ್ರಶಂಸೆಗಳು ಏನಿದ್ದರೂ ಅವೆಲ್ಲ ಇಂಡಿಯಾ ವಾಟರ್ ಪೋರ್ಟಲ್ ಗುಂಪಿನ ನೀರ ನಿಶ್ಚಿಂತೆ ಕಾರ್ಯಾಗಾರ ತಂಡದ ಹರಿಪ್ರಸಾದ್ ನಾಡ್ಗ್, ಶಾರದಾ ಪ್ರಸಾದ್ ಮತ್ತು ವಸಂತ ಕಜೆ ಇವರಿಗೆ ಸಲ್ಲಬೇಕು. ನಮಗೆ ಬ್ಲಾಗಿನ ಬಾಗಿಲು ತೆರೆದು ತೋರಿಸಿದವರು ಅವರೇ. ಮಂಗಳೂರಿನಲ್ಲಿ ಮುತುವರ್ಜಿ ವಹಿಸಿ ಕಾರ್ಯಾಗಾರ ಏರ್ಪಡಿಸಿದ ಅಡ್ಡೂರು ಕೃಷ್ಣ ರಾವ್, ಶ್ರೀ ಪಡ್ರೆ... ಇವರಿಗೆಲ್ಲ ನಾವು ಸದಾ ಆಭಾರಿಗಳಾಗಿರುತ್ತೇವೆ. ನಿಮಗೆಲ್ಲ ಧನ್ಯವಾದಗಳು.

15 March 2009

ಕಥೆ ೦೫ - ಹಸಿರೇ ಹೊನ್ನು

-ಶರತ್ ಬಿ. ನಾಲ್ಕನೇ ತರಗತಿ

ಒಂದು ಕಾಡು, ಆ ಕಾಡಿನಲ್ಲಿ ಒಂದು ಸಭೆ ನಡೆಯಿತು. ಏಕೆಂದರೆ ಕೆಲವು ದಿನಗಳಿಂದ ಎರಡು ಚಿಟ್ಟೆಗಳು “ನಮ್ಮ ಕಾಡು ಒಳ್ಳೆಯದಿಲ್ಲ." ಎಂದಿದ್ದವು. ಹಾಗೇ ಅಲ್ಲಿ ಹಚ್ಚಹಸಿರಿನ ಗಿಡಗಳು ಇರಲಿಲ್ಲ. ಸುತ್ತಮುತ್ತಲಿನ ಎಲೆಗಳನ್ನು ಪ್ರಾಣಿಗಳು ಕೀಳುತ್ತಿದ್ದವು. ಮರಗಳನ್ನೂ ಕಡಿಯುತ್ತಿದ್ದರು. ಸಭೆಯಲ್ಲಿ ರಾಜನು “ಇನ್ನು ಯಾರೂ ಮರಗಳನ್ನು ಕಡಿಯಬಾರದು” ಎಂದಿತು. ಎಲ್ಲಾ ಪ್ರಾಣಿಗಳೂ ಒಪ್ಪಿಕೊಂಡವು. ಸಿಂಹ ರಾಜನ ಆಜ್ಞೆಯನ್ನು ಪಾಲಿಸಿದ್ದರಿಂದ ಕಾಡು ಮತ್ತೆ ಹಸಿರಿನಿಂದ ಕಂಗೊಳಿಸಿತು.

13 March 2009

ಚಿತ್ರ ೦೮ - ಗೋವಿಂದ ಪ್ರಕಾಶ ಪಿ.ಜಿ.


ಮತ್ತೆ ನಿಮ್ಮ ಮುಂದೆ ಒಂದು ಜೀಪು ತಂದು ನಿಲ್ಲಿಸಿದ್ದು ಒಂಭತ್ತನೆ ತರಗತಿಯ ಗೋವಿಂದ ಪ್ರಕಾಶ. ಈ ವರ್ಷ ಇಲೆಕ್ಟ್ರೋನಿಕ್ಸ್ ವೃತ್ತಿ ಪರಿಚಯ ಮೇಳದಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಹಿರಿಮೆ ಆತನಿಗಿದೆ. ಈ ಮಧ್ಯೆ ಬಿಡುವು ಮಾಡಿಕೊಂಡು ಬರೆದ ಚಿತ್ರ ಇದು. ಪೆನ್ಸಿಲ್ ಡ್ರಾಯಿಂಗ್.

ಪ್ರಬಂಧ ೦೫ - ಲೋಹಶಾಸ್ತ್ರ

ಲೋಹಶಾಸ್ತ್ರ ಅಂದರೆ ಲೋಹಗಳ ಕುರಿತಾದ ಅಧ್ಯಯನವನ್ನು ಮಾಡುವಂತಹ ರಸಾಯನ ಶಾಸ್ತ್ರದ ವಿಭಾಗ. ಅದುರಿನಿಂದ ಲೋಹಗಳ ಸಂಗ್ರಹಣೆ, ಅವುಗಳನ್ನು ಜನಸಾಮಾನ್ಯರಿಗೂ ಕೂಡಾ ಉಪಯುಕ್ತವಾಗುವಂತೆ ರೂಪಿಸುವುದು ಲೋಹ ಶಾಸ್ತ್ರದ ಪ್ರಧಾನ ಕೆಲಸ. ಲೋಹಗಳ ಭೌತಿಕ ಹಾಗೂ ರಾಸಾಯನಿಕ ಸ್ವಭಾವಗಳನ್ನು ಅಭ್ಯಸಿಸಿ ಅವುಗಳನ್ನು ಇನ್ನಷ್ಟು ಉಪಯುಕ್ತವಾಗುವಂತೆ ರೂಪಿಸುವುದು ಈ ವಿಜ್ಞಾನ ವಿಭಾಗದ ಇನ್ನೊಂದು ಪ್ರಧಾನ ಕೆಲಸ. ಅಂದ ಹಾಗೆ ಲೋಹ ಮತ್ತು ಮಾನವನ ನಂಟಿಗೆ ಸುಮಾರು ೮೦೦೦ ವರ್ಷಗಳ ಇತಿಹಾಸವಿದೆ. ಅಲ್ಲಿಂದ ಅವು ನಮ್ಮ ಜೀವನದ ಅವಿಭಾಜ್ಯ ಘಟಕವಾಗಿ ಬೆಳೆಯುತ್ತಿದೆ.

ನಾಗರಿಕ ಸಮಾಜದ ವಿಕಾಸವು ಲೋಹಗಳಿಂದ ನಿರ್ಮಿಸಿದ ಉಪಕರಣಗಳೊಂದಿಗೆ ಆರಂಭವಾಯಿತು. ಕಬ್ಬಿಣ, ತಾಮ್ರ, ಅಲ್ಯುಮಿನಿಯಂ... ಹೀಗೆ ಲೋಹಗಳು ಆಧುನಿಕ, ತಾಂತ್ರಿಕ ವಿಜ್ಞಾನದ, ಕೈಗಾರಿಕೆಗಳ ತಳಹದಿಯಾಗಿದೆ. ನಿತ್ಯಜೀವನದಲ್ಲಿ ಲೋಹಗಳ ಉಪಯೋಗ ಹಾಸುಹೊಕ್ಕಾಗಿದೆ. ಲೋಹ ಮೂಲವಸ್ತುಗಳು ಪ್ರಕೃತಿಯಲ್ಲಿ ಶುದ್ಧರೂಪದಲ್ಲಿಯೇ ಇರಬೇಕೆಂದಿಲ್ಲ. ಅವುಗಳು ಕೆಲವೊಮ್ಮೆ ಯೌಗಿಕಗಳಾಗಿಯೋ ಇನ್ನು ಕೆಲವೊಮ್ಮೆ ಇತರ ಪದಾರ್ಥಗಳೊಂದಿಗೆ ಸೇರಿಕೊಂಡೋ ಕಂಡು ಬರುತ್ತವೆ.

ಅವುಗಳನ್ನೆಲ್ಲ ನಾವು ಅದುರುಗಳು ಎಂದು ಕರೆಯುತ್ತೇವೆ. ಅದುರುಗಳಲ್ಲಿರುವ ಇತರ ಪದಾರ್ಥಗಳನ್ನು ನೀಗಿಸಿ ಯೌಗಿಕಗಳಿಂದ ಶುದ್ಧಲೋಹವನ್ನು ಬೇರ್ಪಡಿಸಿ ಲೋಹಗಳನ್ನು ಉಪಯೋಗಿಸಬಹುದು. ಆದ್ದರಿಂದ ಲೋಹಶಾಸ್ತ್ರ ಅಥವಾ ಮೆಟಲರ್ಜಿಗೆ ರಸಾಯನ ಶಾಸ್ತ್ರದಲ್ಲಿ ವಿಶೇಷ ಮಹತ್ವವಿದೆ. ಲೋಹಗಳ ಉತ್ಪಾದನೆ ರಸಾಯನ ಶಾಸ್ತ್ರದ ಪ್ರಧಾನ ಆದ್ಯತೆಯಾಗಿಯೂ ಉಳಿದಿದೆ.

ಇದಕ್ಕಾಗಿ ಲೋಹದ ಅದುರುಗಳನ್ನು ಶುದ್ಧೀಕರಿಸಲು ಮತ್ತು ಯೌಗಿಕಗಳಿಂದ ಲೋಹಗಳನ್ನು ಬೇರ್ಪಡಿಸಲು ಕೆಲವಾರು ಭೌತಿಕ ಹಾಗೂ ರಾಸಾಯನಿಕ ವಿಧಾನಗಳನ್ನು ಒಳಗೊಂಡ ಸಂಕೀರ್ಣ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಲಾಗುವುದು. ಪ್ರತಿಯೊಂದು ಲೋಹಕ್ಕೂ ಅದರದ್ದೇ ಆದ ಶುದ್ಧೀಕರಣ ವಿಧಾನಗಳಿವೆ. ಕೆಲವೊಮ್ಮೆ ಅವುಗಳಲ್ಲಿ ಸಮಾನತೆಯೂ ಕಂಡು ಬರುತ್ತವೆ.

ಶುದ್ಧೀಕರಣ ಪ್ರಕ್ರಿಯೆ ಹಲವು ಹಂತಗಳಲ್ಲಿ ನಡೆಯುತ್ತವೆ. ಅಧಿಕ ಪ್ರಮಾಣದ ಅದುರು ಅತಿ ಕಡಿಮೆ ರಾಸಾಯನಿಕ ವಸ್ತುಗಳನ್ನು ಉತ್ಪಾದಿಸಿ ಶೀಘ್ರವಾಗಿ ಉತ್ಪಾದಿಸಲು ಈ ಪ್ರಕ್ರಿಯೆಗಳು ಸಹಾಯ ಮಾಡುತ್ತವೆ. ಕೈಗಾರಿಕೆಗಳ ಮೂಲಕ ಆರ್ಥಿಕವಾಗಿ ಮಾನವ ಕೋಟಿಗೆ ಈ ಪ್ರಕ್ರಿಯೆಗಳು ಸಹಾಯಕವಾಗಿವೆ. ಸದ್ಯ ಪ್ರಚಲಿತವಾಗಿರುವ ಆವರ್ತಕ ಪಟ್ಟಿಯಲ್ಲಿ, ಅಂದರೆ ೨೦೦೬ ಒಕ್ಟೋಬರ್ ೧೬ರಿಂದ ನಮ್ಮ ನಡುವೆ ೧೧೭ ಮೂಲವಸ್ತುಗಳಿವೆ. ಹೊಸ ಸಂಶೋಧನೆಗಳ ಪ್ರಕಾರ ೧೧೮ನೇ ಮೂಲವಸ್ತುವನ್ನು ವಿಶ್ಲೇಷಿಸಲಾಗಿದೆ. ಆದರೆ ೧೧೭ನೇ ಮೂಲವಸ್ತು ಇನ್ನೂ ಸಂಶೋಧನೆಯ ಹಂತದಲ್ಲಿದೆ.

ಅಂದರೆ ರಸಾಯನ ಶಾಸ್ತ್ರ ಮತ್ತು ಮೂಲವಸ್ತುಗಳ ಕ್ಷೇತ್ರದಲ್ಲಿ ನಿತ್ಯ ಸಂಶೋಧನೆಗಳು, ಬೆಳವಣಿಗೆಗಳು ಜರಗುತ್ತಿವೆ. ಕ್ಷಾರೀಯ ಲೋಹಗಳು, ಕ್ಷಾರೀಯ ಮೃತ್ತಿಕಾ ಲೋಹಗಳು, ಮಧ್ಯಸ್ಥ ಮೂಲವಸ್ತುಗಳು... ಹೀಗೆ ಆವರ್ತಕ ಪಟ್ಟಿಯಲ್ಲಿ ಗುಂಪುಗಳು ಆರಂಭವಾಗುತ್ತವೆ. ಹೀಗೆ ನಮ್ಮ ನಿಮ್ಮ ನಡುವೆ ಸುಮಾರು ೮೦ಕ್ಕಿಂತಲೂ ಹೆಚ್ಚಿನ ಲೋಹಗಳನ್ನು ಗುರುತಿಸಲಾಗಿದೆ. ಲೋಹಗಳ ಕ್ರಿಯಾಶೀಲತೆಯೂ ಹೆಚ್ಚು. ಕಬ್ಬಿಣಕ್ಕೆ ಬಹು ಸುಲಭವಾಗಿ ತುಕ್ಕು ಹಿಡಿಯುವಂತೆಯೇ ಹೆಚ್ಚಿನ ಎಲ್ಲಾ ಲೋಹಗಳೂ ಸುಲಭವಾಗಿ ಯೌಗಿಕಗಳನ್ನು ಉಂಟುಮಾಡುತ್ತವೆ. ಚಿನ್ನ, ಬೆಳ್ಳಿ, ಪ್ಲಾಟಿನಂ ಇತ್ಯಾದಿ ಕೆಲವು ಮೂಲವಸ್ತುಗಳು ಮಾತ್ರ ಪರಿಸರದಲ್ಲಿ ಸ್ವತಂತ್ರವಾಗಿ ಕಂಡು ಬರುತ್ತವೆ. ಉಳಿದ ಲೋಹಗಳು ಭೂಮಿಯಲ್ಲಿ ಲೋಹ ಯೌಗಿಕಗಳಾಗಿ ಕಂಡು ಬರುತ್ತವೆ. ಕಂಚಿನ ಯುಗ, ಕಬ್ಬಿಣದ ಕಾಲ... ಹೀಗೆ ನಮಗೂ ಲೋಹಗಳಿಗೂ ಅವಿನಾಭಾವ ನಂಟು ಬೆಳೆದಿದೆ.

ಲೋಹಗಳು ಪ್ರಾಧಾನ್ಯತೆಯನ್ನು ಪಡೆದುಕೊಳ್ಳಲು ಪ್ರಧಾನ ಕಾರಣವೆಂದರೆ ಅವುಗಳ ಹೊಳಪು, ಅತ್ಯಂತ ತೆಳುವಾದ ಹಾಳೆಗಳನ್ನೂ ಮಾಡಲು ಸಾಧ್ಯವಾಗುವಂತಹ ಪತ್ರಶೀಲತ್ವ, ಸಪೂರದ ತಂತಿಗಳನ್ನೂ ಮಾಡಲು ಸಾಧ್ಯವಾಗುವಂತಹ ತಂತು ಶೀಲತ್ವ ಇತ್ಯಾದಿಗಳು. ಇನ್ನೂ ಪ್ರಧಾನವಾದ ಗುಣಗಳೆಂದರೆ ಅವುಗಳು ತಮ್ಮ ಮೂಲಕ ವಿದ್ಯುತ್ತನ್ನು ಹಾದುಹೋಗಲು ಬಿಡುತ್ತವೆ, ಹಾಗೆಯೇ ಅವುಗಳು ಉಷ್ಣವಾಹಕಗಳೂ ಹೌದು. ಲೋಹಗಳ ಕೊರೆತವನ್ನು ತಡೆಗಟ್ಟಲೆಂದೇ ಮಿಶ್ರಲೋಹಗಳ ತಯಾರಿಯ ವಿಧಾನಗಳು ಆರಂಭವಾದ ನಂತರ ನಮ್ಮ ಮತ್ತು ಲೋಹಗಳ ನಂಟು ಮತ್ತಷ್ಟು ಆಪ್ತವಾಗಿವೆ. ಲೋಹಗಳು ಬಹುತೇಕ ಧನ ಅಯೋನ್‌ಗಳನ್ನೇ ಉಂಟು ಮಾಡುತ್ತವೆ. ಸಾಮಾನ್ಯವಾಗಿ ಇಲೆಕ್ಟ್ರೋನೆಗೆಟಿವ್ ಮೂಲವಸ್ತು ಅಥವಾ ಅವುಗಳ ಬಣ - ರೇಡಿಕಲ್ ಗಳೊಂದಿಗೆ ವರ್ತಿಸಿ ಲೋಹಗಳು ಯೌಗಿಕಗಳನ್ನು ಉಂಟುಮಾಡುತ್ತವೆ. ಅಂದರೆ ಲೋಹಗಳು ಒಂದಕ್ಕಿಂತ ಹೆಚ್ಚು ಖನಿಜ ಯೌಗಿಕಗಳಾಗಿಯೂ ಕಂಡು ಬರುತ್ತವೆ.

ಉದಾಹರಣೆಗೆ ಸಾಮಾನ್ಯ ಉಪ್ಪು ಮತ್ತು ಚಿಲಿಸಾಲ್ಟ್ ಪೀಟರ್ ಸೋಡಿಯಂ ಖನಿಜಗಳು. ಕಾರ್ನಲೈಟ್ ಮತ್ತು ಸಿಲ್‌ವಿನ್ ಪೊಟಾಶಿಯಮ್ ಯೌಗಿಕಗಳು, ಮೇಗ್ನೆಸೈಟ್ ಮತ್ತು ಡೊಲೊಮೈಟ್ ಮೆಗ್ನೀಶಿಯಂ ಯೌಗಿಕಗಳು, ಜಿಪ್ಸಂ ಮತ್ತು ಸುಣ್ಣದ ಕಲ್ಲು ಅಥವಾ ಚಂದ್ರಕಾಂತ ಶಿಲೆ ಕೇಲ್ಸಿಯಂ ಖನಿಜಗಳು, ಬೋಕ್ಸೈಟ್ ಮತ್ತು ಕ್ರಯೋಲೈಟ್ ಅಲ್ಯೂಮಿನಿಯಂಗೆ, ಮೇಗ್ನೆಟೈಟ್, ಹೆಮೆಟೈಟ್ ಮತ್ತು ಅಯರ್ನ್ ಪೈರೈಟಿಸ್ ಕಬ್ಬಿಣಕ್ಕೆ, ಕುಪ್ರೈಟ್, ಮೇಲಕೈಟ್ ಮತ್ತು ಕೋಪರ್ ಪೈರೈಟಿಸ್‌ಗಳು ತಾಮ್ರಕ್ಕೆ, ಕೆಲಮಿನ್ ಮತ್ತು ಝಿಂಕ್ ಬ್ಲೆಂಡ್ ಸತುವಿನ ಖನಿಜಗಳಾಗಿವೆ. ಶುದ್ಧವಾದ ಲೋಹಗಳು ದೊರೆಯಬೇಕಾದರೆ ಈ ಯೌಗಿಕಗಳಿಂದ ಲೋಹದ ಅಯೋನುಗಳನ್ನು ಅಪಕರ್ಷಿಸಬೇಕು. ಆದರೆ ಎಲ್ಲಾ ಖನಿಜಗಳಿಂದ ಲೋಹಗಳನ್ನು ಬೇರ್ಪಡಿಸುವುದು ಸುಲಭವೂ ಅಲ್ಲ. ಸುಲಭದಲ್ಲಿ ಹಾಗೂ ಕಡಿಮೆ ಖರ್ಚಿನಲ್ಲಿ ಲೋಹವನ್ನು ಪ್ರತ್ಯೇಕಿಸಲು ಸಾಧ್ಯವಾಗುವ ಖನಿಜವು ಅದುರು ಎಂದು ತಿಳಿಯಲ್ಪಡುತ್ತದೆ. ಲೋಹಗಳ ಸಂಗ್ರಹಣೆಯು ಪ್ರಧಾನವಾಗಿ ಮೂರು ಹಂತಗಳನ್ನು ಹಾದು ಹೋಗುತ್ತದೆ. ಪ್ರಧಾನವಾಗಿ ಅದುರಿನ ಜೊತೆಗಿರುವ ಮಾಲಿನ್ಯಗಳನ್ನು ನೀಗಿಸುವ ಕೆಲಸ ಆಗಬೆಕು. ಮುಂದೆ ಅವುಗಳನ್ನು ಯೋಗ್ಯ ರೀತಿಯಲ್ಲಿ ಸಂಸ್ಕರಿಸಬೇಕು. ನಮ್ಮ ಸೌಕರ್ಯಕ್ಕಾಗಿ ಈ ಹಂತಗಳನ್ನು ಅದುರಿನ ಸಾಂದ್ರೀಕರಣ, ಲೋಹದ ಬೇರ್ಪಡಿಸುವಿಕೆ, ಲೊಹದ ಶುದ್ಧೀಕರಣ ಎಂದು ಗುರುತಿಸಿಕೊಳ್ಳುತ್ತೇವೆ. ಅದುರುಗಳ ಜೊತೆಗಿರುವ ಕಶ್ಮಲಗಳಿಗೆ ಗೇಂಗ್ ಎಂದು ಹೆಸರು. ಗೇಂಗ್‌ಗಳನ್ನು ಬೇರ್ಪಡಿಸುವುದು ಪ್ರಥಮ ಹಂತ. ಅದುರಿನ ಹಾಗೂ ಗೇಂಗ್‌ಗಳ ಸ್ವಭಾವವನ್ನು ಅನುಸರಿಸಿ ಅದುರುಗಳ ಸಾಂದ್ರೀಕರಣದ ಪ್ರಕ್ರಿಯೆ ಜರಗುತ್ತದೆ.

ಅದುರುಗಳ ಸಾಂದ್ರೀಕರಣದ ಈ ಪ್ರಕ್ರಿಯೆ ವಿವಿಧ ವಿಧಿ ವಿಧಾನಗಳನ್ನು ಒಳಗೊಂಡಿದೆ. ನೀರಿನ ಪ್ರವಾಹದಲ್ಲಿ ತೊಳೆಯುವುದು, ನೊರೆಯಲ್ಲಿ ತೇಲಿಸುವುದು, ಅಯಸ್ಕಾಂತೀಯ ಬೇರ್ಪಡಿಸುವಿಕೆ, ಲೀಚಿಂಗ್, ರೋಸ್ಟಿಂಗ್, ಕೇಲ್ಸಿನೇಷನ್ ಇವುಗಳು ಹೆಸರಿಸಿಕೊಳ್ಳಬಹುದಾದ ಹಂತಗಳಾಗಿವೆ.

ಅದುರಿಗಿಂತಲೂ ಸಾಂದ್ರತೆ ಕಡಿಮೆಯಾಗಿರುವ ಕಶ್ಮಲಗಳನ್ನು ಹೋಗಲಾಡಿಸಲು ನೀರಿನ ಪ್ರವಾಹದಲ್ಲಿ ತೊಳೆಯುವ ವಿಧಾನವನ್ನು ಉಪಯೋಗಿಸಲಾಗುವುದು. ಹುಡಿಮಾಡಲ್ಪಟ್ಟ ಅದುರನ್ನು ನೀರಿನ ಪ್ರವಾಹದಲ್ಲಿ ತೊಳೆಯುವಾಗ ತೇಲಿಕೊಳ್ಳುವ ಕಶ್ಮಲಗಳು ನೀರಿನೊಂದಿಗೆ ಹರಿದು ಹೋಗುವುದು. ಅದುರು ತಳದಲ್ಲಿ ಉಳಿಯುವುದು. ನಾವು ಮನೆಯಲ್ಲಿ ಅಕ್ಕಿ ತೊಳೆಯುವ ಹಾಗೆ ತುಂಬಾ ಸರಳ ವಿಧಾನ. ನೊರೆಯಲ್ಲಿ ತೇಲಿಸುವ ವಿಧಾನವು ಕಶ್ಮಲಗಳ ಸಾಂದ್ರತೆ ಅದುರಿಗಿಂತ ಹೆಚ್ಚಾಗಿರುವ ಸಂದರ್ಭಗಳಲ್ಲಿ ಬಳಕೆಯಾಗುತ್ತದೆ. ಉದಾಹರಣೆಗೆ ಕೋಪರ್ ಸಲ್ಫೈಡ್ ಅದುರನ್ನು ನೀರು ಹಾಗೂ ಪೈನ್ ಎಣ್ಣೆ ಕದಡಿಕೊಂಡಿರುವ ಮಿಶ್ರಣಕ್ಕೆ ಸೇರಿಸಲಾಗುವುದು. ಪೈನ್ ಎಣ್ಣೆ ಗೇಂಗ್‌ಗಳಿಗಿಂತಲೂ ಹಗುರವಾಗಿರುವುದು ಮತ್ತು ಕೆಲವು ಅದುರುಗಳನ್ನು ಒದ್ದೆ ಮಾಡುವ ಸಾಮರ್ಥ್ಯ ನೀರಿಗಿಂತಲೂ ಪೈನ್ ಎಣ್ಣೆಗೆ ಅಧಿಕವಾಗಿರುವುದು ಇದಕ್ಕೆ ಕಾರಣ. ಬಲವಾದ ವಾಯುವಿನ ಪ್ರವಾಹವನ್ನು ಹಾಯಿಸಿ ಇದನ್ನು ಕದಡಿಸಿ ನೊರೆಯನ್ನು ಉಂಟುಮಾಡಲಾಗುವುದು. ಆಗ ಅದುರು ಪೂರ್ಣವಾಗಿ ಒದ್ದೆಯಾಗಿ ನೊರೆಯೊಂದಿಗೆ ಅದುರು ತೇಲುವುದು. ನಂತರ ದುರ್ಬಲ ಸಲ್ಫ್ಯೂರಿಕ್ ಆಮ್ಲವನ್ನು ಸಿಂಪಡಿಸಿ ಇವುಗಳನ್ನು ಬೇರ್ಪಡಿಸಲಾಗುವುದು. ಲೋಹದ ಕಾರ್ಖಾನೆಗಳಿಗೆ ನೀರು ಹೀಗೆ ಅತಿಯಾಗಿ ಬೇಕಾಗುವುದರಿಂದ ಅವುಗಳಲ್ಲಿ ಹೆಚ್ಚಿನವುಗಳೂ ನದೀ ತಟಗಳಲ್ಲೇ ಕಂಡು ಬರುತ್ತವೆ.

ಕಾಂತೀಯ ಅಂದರೆ ಅಯಸ್ಕಾಂತದ ಆಕರ್ಷಣೆಗೆ ಒಳಗಾಗುವ ಸ್ವಭಾವವಿರುವ ಅದುರನ್ನು ಕಶ್ಮಲಗಳಿಂದ ಬೇರ್ಪಡಿಸಲು ಹುಡಿಮಾಡಲ್ಪಟ್ಟ ಅದುರನ್ನು ಒಂದು ಕಾಂತೀಯ ಕ್ಷೇತ್ರದ ಮೂಲಕ ಹಾದು ಹೋಗುವಂತೆ ಮಾಡಲಾಗುವುದು. ಆಗ ಕಾಂತೀಯ ಸ್ವಭಾವವಿರುವ ಅದುರು ಕಾಂತದ ಸಮೀಪದಲ್ಲಿ ಸಂಗ್ರಹಿಸಲ್ಪಡುವುದು. ಮೇಗ್ನೆಟೈಟ್ ಅದುರನ್ನು ಸಾಂದ್ರೀಕರಿಸಲು ಈ ವಿಧಾನವನ್ನು ಅನುಸರಿಸಲಾಗುವುದು.

ಸ್ಥಿರವಿದ್ಯುತ್ತಿನ ಸಹಕಾರದಿಂದ ವಿದ್ಯುತ್ ಕ್ಷೇತ್ರವನ್ನು ನಿರ್ಮಿಸಿ ಕೆಲವು ಲೋಹ ಅದುರುಗಳನ್ನು ನಿರ್ಮಿಸಲಾಗುವುದು. ಸಮಾನ ಚಾರ್ಜುಗಳು ವಿಕರ್ಷಿಸುತ್ತವೆ, ವಿರುದ್ಧ ಚಾರ್ಜುಗಳು ಆಕರ್ಷಿಸುತ್ತವೆ ಎನ್ನುವ ತತ್ವವನ್ನು ಇಲ್ಲಿ ಪ್ರಧಾನವಾಗಿ ಅನುಸರಿಸಲಾಗುವುದು. ಅದುರಿನಲ್ಲಿರುವ ಕಶ್ಮಲಗಳು ಕರಗದ ಆದರೆ ಲೋಹದ ಯೌಗಿಕಗಳು ಕರಗುವ ದ್ರಾವಕವನ್ನು ತೆಗೆದುಕೊಂಡು ಅದರಲ್ಲಿ ಹುಡಿ ಮಾಡಿದ ಅದುರನ್ನು ಸೇರಿಸಿ ರಾಸಾಯನಿಕ ಕ್ರಿಯೆಯನ್ನು ಜರಗಿಸಲಾಗುವುದು. ಉದಾಹರಣೆಗೆ ಅಲ್ಯೂಮಿನಿಯಂ ಅದುರಾಗಿರುವ ಬೋಕ್ಸೈಟ್ ಸೋಡಿಯಂ ಹೈಡ್ರೋಕ್ಸೈಡ್‌ನೊಂದಿಗೆ ಸೇರಿ ಸೋಡಿಯಂ ಅಲ್ಯುಮಿನೇಟನ್ನು ಉಂಟು ಮಾಡುವುದು. ಈ ವಿಧಾನವು ಲೀಚಿಂಗ್ ಎಂದು ಗುರುತಿಸಲ್ಪಡುತ್ತದೆ. ಚಿನ್ನ, ಬೆಳ್ಳಿ ಎಂಬಿವುಗಳ ಅದುರುಗಳು ಸೋಡಿಯಮ್ ಸೈನೈಡ್ ದ್ರಾವಣದೊಂದಿಗೆ ವಾಯುಪ್ರವಾಹದ ಸಾನ್ನಿಧ್ಯದಲ್ಲಿ ವರ್ತಿಸಿ ಸೋಡಿಯಂ ಓರೋ ಸೈನೈಡ್, ಸೋಡಿಯಂ ಅರ್ಜೆಂಟೋ ಸೈನೈಡ್ ಎಂಬಿವುಗಳೂ ಉಂಟಾಗುತ್ತವೆ. ಹುಡಿಮಾಡಿದ ಅದುರನ್ನು ಶಕ್ತಿಯುತವಾದ ವಾಯುವಿನ ಪ್ರವಾಹದಲ್ಲಿ ಬಿಸಿ ಮಾಡುವ ವಿಧಾನ ರೋಸ್ಟಿಂಗ್ ಆಗಿದೆ. ಈ ಮೂಲಕ ಲೋಹದ ಓಕ್ಸೈಡುಗಳನ್ನು ಉಂಟುಮಾಡಲಾಗುವುದು. ಲೋಹದ ಓಕ್ಸೈಡುಗಳನ್ನು ಬೇರ್ಪಡಿಸುವುದು ಸುಲಭ. ಸೀಸದ ಸಲ್ಫೈಡ್ ಮತ್ತು ಸತುವಿನ ಸಲ್ಫೈಡುಗಳನ್ನು ಈ ಮೂಲಕ ಸೀಸದ ಓಕ್ಸೈಡ್ ಮತ್ತು ಸತುವಿನ ಓಕ್ಸೈಡುಗಳನ್ನಾಗಿ ಬದಲಾಯಿಸಲಾಗುವುದು.

ಸುಣ್ಣದ ಕಲ್ಲು ಅಥವಾ ಚಂದ್ರಕಾಂತ ಶಿಲೆಯಂತಹ ಕೇಲ್ಸಿಯಂ ಕಾರ್ಬೊನೇಟ್ ಅದುರುಗಳನ್ನು ನಿಯಂತ್ರಿತ ವಾಯುವಿನ ಪ್ರವಾಹದಲ್ಲಿ ಅಥವಾ ವಾಯುವಿನ ಸಂಪರ್ಕವಿಲ್ಲದೆ ಬಿಸಿ ಮಾಡಲಾಗುವುದು. ಆಗ ಅಂಗಾರಾಮ್ಲ ಬೇರ್ಪಟ್ಟು ಕೇಲ್ಸಿಯಂ ಓಕ್ಸೈಡ್ ಅಥವಾ ಸುಟ್ಟ ಸುಣ್ಣ ಉಂಟಾಗುವುದು. ಅಂದರೆ ಕೇಲ್ಸಿನೇಷನ್ ಎನ್ನುವ ಈ ವಿಧಾನದ ಮೂಲಕ ಭಾಷ್ಪವಾಗುವ ಗುಣವುಳ್ಳ ಕಶ್ಮಲಗಳನ್ನು ಹೋಗಲಾಡಿಸಲಾಗುವುದು. ಸತು, ಕೇಲ್ಸಿಯಂ, ಅಲ್ಯುಮಿನಿಯಂ ಎಂಬಿವುಗಳ ಕಾರ್ಬೊನೇಟುಗಳನ್ನೂ ಹೈಡ್ರೋಕ್ಸೈಡುಗಳನ್ನೂ ಈ ವಿಧಾನದಿಂದ ಓಕ್ಸೈಡುಗಳನ್ನಾಗಿ ಪರಿವರ್ತಿಸಬಹುದು. ಸಾಂದ್ರೀಕರಿಸಲ್ಪಟ್ಟ ಅದುರಿನಿಂದ ಲೋಹವನ್ನು ಬೇರ್ಪಡಿಸುವ ಕೆಲಸ ಮುಂದಿನ ಹಂತ. ಇಲ್ಲೂ ಅದುರಿನ ಸ್ವಭಾವವನ್ನು ಹೊಂದಿಕೊಂಡು ಲೋಹವನ್ನು ಬೇರ್ಪಡಿಸಲು ಸೂಕ್ತ ವಿಧಾನವನ್ನು ಅನುಸರಿಸಲಾಗುವುದು.

ಸ್ಮೆಲ್ಟಿಂಗ್, ಅಲ್ಯುಮಿನಿಯಂ, ಮೆಗ್ನೀಶಿಯಂ, ಜಲಜನಕಗಳಿಂದ ಅಪಕರ್ಷಣೆ, ಹೈಡ್ರೋಮೆಟಲರ್ಜಿ ಇವುಗಳು ಲೋಹದ ಬೇರ್ಪಡಿಸುವಿಕೆಯ ಕೆಲವು ಪ್ರಧಾನ ವಿಧಾನಗಳಾಗಿವೆ. ರೋಸ್ಟಿಂಗ್ ಅಥವಾ ಕೇಲ್ಸಿನೇಷನ್‌ಗೆ ಗುರಿಪಡಿಸಿದ ಅದುರಿನೊಂದಿಗೆ ಕೋಕ್ ಅಥವಾ ಇದ್ದಲನ್ನು ಸೇರಿಸಿ ಉನ್ನತ ಉಷ್ಣತೆಯಲ್ಲಿ ಬಿಸಿ ಮಾಡುವುದನ್ನು ಸ್ಮೆಲ್ಟಿಂಗ್ ಎನ್ನಲಾಗುವುದು. ಸತು, ಕಬ್ಬಿಣ, ನಿಕ್ಕಲ್, ಸೀಸ, ತವರ ಮುಂತಾದವುಗಳನ್ನು ಈ ರೀತಿಯಲ್ಲಿ ಬೇರ್ಪಡಿಸಬಹುದು. ಸಾಂದ್ರೀಕರಿಸಿದ ಅದುರಿನಲ್ಲಿ ಉಳಿದಿರುವ ಕಶ್ಮಲಗಳನ್ನು ಹೋಗಲಾಡಿಸಲು ಫ್ಲಕ್ಸ್ ಎಂಬ ವಸ್ತುವನ್ನು ಸೇರಿಸಲಾಗುವುದು. ಕಶ್ಮಲದ ಸ್ವಭಾವವನ್ನು ಹೊಂದಿಕೊಂಡು ಫ್ಲಕ್ಸನ್ನು ಆರಿಸಲಾಗುವುದು. ಕಶ್ಮಲವು ಆಮ್ಲೀಯ ಗುಣದ್ದಾದರೆ ಸುಟ್ಟ ಸುಣ್ಣದಂತಹ ಕ್ಷಾರೀಯ ವಸ್ತುವನ್ನು ಫ್ಲಕ್ಸ್ ಆಗಿಯೂ ಕಶ್ಮಲ ಕ್ಷಾರೀಯ ಗುಣದ್ದಾದರೆ ಸಿಲಿಕಾದಂತಹ ಅಮ್ಲೀಯ ವಸ್ತು ಫ್ಲಕ್ಸ್ ಆಗಿ ಬಳಸಲ್ಪಡುತ್ತದೆ. ಫ್ಲಕ್ಸ್ ಮತ್ತು ಗೇಂಗ್ ಸೇರಿ ಉಂಟಾಗುವ ವಸ್ತುವುಗೆ ಸ್ಲೇಗ್ ಎಂದು ಹೆಸರು.

ಸ್ಲೇಗ್‌ನ ಸಾಂದ್ರತೆ ದ್ರವ ಲೋಹಕ್ಕಿಂತ ಕಡಿಮೆಯಾಗುವುದರಿಂದ ಅದು ತೇಲುವುದು. ಈ ಮೂಲಕ ಕಶ್ಮಲಗಳನ್ನು ನಿವಾರಿಸಬಹುದು. ಇಲ್ಲಿ ಗಮನಿಸಿಕೊಳ್ಳಬೇಕಾದ ಅಂಶವೆಂದರೆ ಫ್ಲಕ್ಸ್, ಗೇಂಗ್, ಸ್ಲೇಗ್ ಇವುಗಳೆಲ್ಲ ತಾಂತ್ರಿಕ ಶಬ್ದಗಳು ಅಷ್ಟೆ. ಕಬ್ಬಿಣದ ತಯಾರಿಯಲ್ಲಿ ಬಳಸಲಾಗುವ ಊದುಕುಲುಮೆ ಸ್ಮೆಲ್ಟಿಂಗ್ ತತ್ವದ ಆಧಾರದಲ್ಲಿ ತನ್ನ ಕೆಲಸವನ್ನು ನಿರ್ವಹಿಸುತ್ತದೆ. ಒಂದು ರಾಸಾಯನಿಕ ಕ್ರಿಯೆಯಲ್ಲಿ ಇಲೆಕ್ಟ್ರೋನ್‌ಗಳನ್ನು ಕಳೆದುಕೊಳ್ಳುವುದು ಉತ್ಕರ್ಷಣೆ ಎಂದೂ ಇಲೆಕ್ಟ್ರೋನ್‌ಗಳನ್ನು ಪಡೆದುಕೊಳ್ಳುವುದು ಅಪಕರ್ಷಣೆ ಎಂದೂ ಕರೆಯಲ್ಪಡುವುದು. ಸರಳವಾಗಿ ಹೇಳುವುದಾದರೆ ಆಮ್ಲಜನಕವನ್ನು ಸ್ವೀಕರಿಸಿ ಹೊಸ ಯೌಗಿಕವನ್ನು ಉಂಟು ಮಾಡುವುದು ಉತ್ಕರ್ಷಣೆ ಹಾಗೆಯೇ ಆಮ್ಲಜನಕವನ್ನು ಕಳೆದುಕೊಳ್ಳುವುದು ಅಪಕರ್ಷಣೆ ಎಂದೂ ಹೇಳಬಹುದು. ಮೇಂಗನೀಸ್, ಕ್ರೋಮಿಯಂ, ವೆನೇಡಿಯಂ ಮುಂತಾದ ಲೋಹಗಳು ಉನ್ನತ ಉಷ್ಣತೆಯಲ್ಲಿ ಅಂಗಾರವನ್ನು ಉಪಯೋಗಿಸಿ ಕಾರ್ಬೈಡ್ ಯೌಗಿಕಗಳನ್ನು ಉಂಟುಮಾಡುತ್ತವೆ.

ಈ ಲೋಹಗಳ ಓಕ್ಸೈಡುಗಳನ್ನು ಅಲ್ಯುಮಿನಿಯಂ ಉಪಯೋಗಿಸಿ ಅಪಕರ್ಷಿಸಲಾಗುವುದು. ವಿದ್ಯುದ್ರಾಸಾಯನಿಕ ಶ್ರೇಣಿಯಲ್ಲಿ ಅಲ್ಯುಮಿನಿಯಂಗಿಂತ ಕಡಿಮೆ ಪ್ರವರ್ತಕಗಳಾದ ಲೋಹಗಳಿಗೆ ಈ ವಿಧಾನವನ್ನು ಅನುಸರಿಸಲಾಗುವುದು. ತಾಮ್ರ, ಸತು, ಸೀಸ, ಕಬ್ಬಿಣ ಮುಂತಾದ ವಿದ್ಯುತ್ ಧನತ್ವ ಕಡಿಮೆಯಾದ ಲೋಹಗಳನ್ನು ಅವುಗಳ ಯೌಗಿಕಗಳಿಂದ ಹೈಡ್ರೋಜನ್ ಉಪಯೋಗಿಸಿ ಬೇರ್ಪಡಿಸಬಹುದು. ಅಂದ ಹಾಗೆ ಲೋಹ ಯೌಗಿಕಗಳಲ್ಲಿ ಲೋಹಗಳು ಅವುಗಳ ಧನ ಅಯೋನುಗಳಾಗಿ ಕಂಡು ಬರುತ್ತವೆ ಎಂದಿದ್ದೆವಲ್ಲ, ಈ ಹೈಡ್ರೋಜನ್ ಅಯೋನುಗಳು ಬಿಡುಗಡೆಗೊಳಿಸುವ ಇಲೆಕ್ಟ್ರೋನುಗಳನ್ನು ಸ್ವೀಕರಿಸಿ ಇವುಗಳು ಲೋಹಗಳಾಗಿ ಪರಿವರ್ತನೆ ಹೊಂದುತ್ತವೆ.

ಹೈಡ್ರೋಮೆಟಲರ್ಜಿ ಎಂದರೆ ನೀರಿನಲ್ಲಿ ವಿಲೀನವಾಗದ ಅದುರುಗಳನ್ನು ಯೋಗ್ಯವಾದ ರಾಸಾಯನಿಕ ಪದಾರ್ಥವನ್ನು ಉಪಯೋಗಿಸಿ ಜಲೀಯ ದ್ರಾವಣವಾಗಿ ಪರಿವರ್ತಿಸುವ ಪ್ರಕ್ರಿಯೆಯಾಗಿದೆ. ಚಿನ್ನ, ಬೆಳ್ಳಿ ಎಂಬಿವುಗಳ ಅದುರುಗಳಿಂದ ಲೋಹವನ್ನು ಬೇರ್ಪಡಿಸಲು ಈ ವಿಧಾನವನ್ನು ಉಪಯೋಗಿಸುವರು. ಹುಡಿ ಮಾಡಿದ ಅದುರನ್ನು ಸೋಡಿಯಂ ಸೈನೈಡ್ ಅಥವಾ ಪೊಟಾಶಿಯಂ ಸೈನೈಡ್ ಇವುಗಳ ಜಲೀಯ ದ್ರಾವಣದೊಂದಿಗೆ ಸೇರಿಸಿ ಅದರ ಮೂಲಕ ಶಕ್ತಿಯುತವಾದ ವಾಯುವಿನ ಪ್ರವಾಹವನ್ನು ಹಾಯಿಸಲಾಗುವುದು. ಚಿನ್ನ ಮತ್ತು ಬೆಳ್ಳಿ ಅವುಗಳ ಸೈನೈಡ್ ಸಂಕೀರ್ಣ ಯೌಗಿಕವಾಗಿ ನೀರಿನಲ್ಲಿ ವಿಲೀನವಾಗುತ್ತವೆ. ಇದರಿಂದ ಚಿನ್ನ, ಬೆಳ್ಳಿಗಳಿಗಿಂತ ಹೆಚ್ಚು ವಿದ್ಯುತ್ ಧನತ್ವ ಇರುವ ಹಾಗೂ ಸಂಕೀರ್ಣ ಯೌಗಿಕಗಳನ್ನು ಉಂಟು ಮಾಡುವ ಸಾಮರ್ಥ್ಯವಿರುವ ಸತುವಿನಂತಹ ಒಂದು ಲೋಹವನ್ನು ಉಪಯೋಗಿಸಿ ಚಿನ್ನ, ಬೆಳ್ಳಿಗಳನ್ನು ಬೇರ್ಪಡಿಸಬಹುದು. ಲೋಹದ ಶುದ್ಧೀಕರಣ ಕೊನೆಯ ಹಂತ. ಈಗಾಗಲೇ ವಿಶ್ಲೇಷಿಸಲಾಗಿರುವ ಲೋಹಗಳಲ್ಲಿ ಇನ್ನೂ ಕಶ್ಮಲಗಳು ಉಳಿಯಬಹುದು. ಅವುಗಳನ್ನು ನಿವಾರಿಸಿ ಶುದ್ಧೀಕರಿಸುವುದು ಲೋಹ ಉತ್ಪಾದನೆಯ ಮೂರನೆಯ ಹಂತವಾಗಿದೆ. ದ್ರವೀಕರಿಸಿ ಶುದ್ಧೀಕರಿಸುವುದು, ಭಟ್ಟಿ ಇಳಿಸುವಿಕೆ, ವಿದ್ಯುತ್ ವಿಶ್ಲೇಷಣೆಗಳು ಈ ಹಂತದಲ್ಲಿ ಅನುಸರಿಸುವ ಮೂರು ವಿಧಾನಗಳಾಗಿವೆ. ಸೀಸ, ತವರ ಇತ್ಯಾದಿ ಬೇಗನೆ ಕರಗುವ ಲೋಹಗಳನ್ನು ಓರೆಯಾಗಿರುವ ತಲದಲ್ಲಿ ಇರಿಸಿ ಕರಗಿಸಲಾಗುವುದು. ಲೋಹ ಕರಗಿ ಕೆಳಭಾಗಕ್ಕೆ ಹರಿಯುವುದು. ಕಶ್ಮಲಗಳು ಉಳಿಯುತ್ತವೆ. ಪಾದರಸ, ಸತುವಿನಂತಹ ಬೇಗನೆ ಆವಿಯಾಗುವ ಲೋಹಗಳನ್ನು ಚೆನ್ನಾಗಿ ಬಿಸಿ ಮಾಡಿದಾಗ ಕಶ್ಮಲಗಳು ಬೇರ್ಪಟ್ಟು ಆವಿಯಾಗಿ ಹೊರಬರುತ್ತವೆ. ಈ ವಿಧಾನವನ್ನು ಭಟ್ಟಿ ಇಳಿಸುವಿಕೆ ಎನ್ನಲಾಗುವುದು. ಲೋಹದ ಅಯೋನುಗಳ ಉತ್ಕರ್ಷಣೆ, ಅಪಕರ್ಷಣೆ ಗುಣಗಳ ಆಧಾರದಲ್ಲಿ ವಿದ್ಯುತ್ ವಿಶ್ಲೇಷಣಾ ವಿಧಾನದ ಮೂಲಕ ಶುದ್ಧೀಕರಣ ಕ್ರಿಯೆಯನ್ನು ನಡೆಸಲಾಗುವುದು. ಶುದ್ಧೀಕರಿಸಬೇಕಾದ ಲೋಹವನ್ನು ಏನೋಡ್ ಆಗಿಯೂ ಶುದ್ಧ ಲೋಹದ ತೆಳು ಹಾಳೆ ಅಥವಾ ಯೋಗ್ಯ ವಿದ್ಯುತ್ ವಾಹಕವನ್ನು ಕೇಥೋಡ್ ಆಗಿಯೂ ಲೋಹದ ಅಯೋನುಗಳನ್ನು ಒಳಗೊಂಡ ದ್ರಾವಣವನ್ನು ಇಲೆಕ್ಟ್ರೋಲೈಟ್ ಆಗಿ ತೆಗೆದುಕೊಳ್ಳಲಾಗುವುದು. ಸೂಕ್ತ ವಿಭವಾಂತರದ ವಿದ್ಯುತ್ ಪ್ರವಾಹವನ್ನು ಹಾಯಿಸಿದಾಗ ಏನೋಡಿನಲ್ಲಿರುವ ಲೋಹವು ಉತ್ಕರ್ಷಣೆ ಹೊಂದಿ ದ್ರಾವಣಕ್ಕೆ ಸೇರಿಕೊಂಡಿದ್ದ ಇತರ ಲೋಹಗಳೂ ಧನ ಅಯೋನುಗಳಾಗಿ ದ್ರಾವಣದಲ್ಲಿ ವಿಲೀನವಾಗುತ್ತವೆ.

ದ್ರಾವಣದಲ್ಲಿರುವ ಎಲ್ಲ ಧನ ಅಯೋನುಗಳೂ ಕೇಥೋಡಿನ ಕಡೆಗೆ ಆಕರ್ಷಿಸಲ್ಪಡುವುದಾದರೂ ಶುದ್ಧೀಕರಿಸಬೇಕಾದ ಲೋಹ ಮಾತ್ರ ಕೇಥೋಡಿನಲ್ಲಿ ನಿಕ್ಷೇಪಿಸಲ್ಪಡುತ್ತದೆ. ಕೇಥೋಡಿನಲ್ಲಿ ನಿಕ್ಷೇಪಿಸಲ್ಪಡದ ಇತರ ಲೋಹ ಯೌಗಿಕಗಳು ಏನೋಡ್ ಕಶ್ಮಲಗಳ ರೂಪದಲ್ಲಿ ಟಾಂಕಿಯಲ್ಲಿ ಸಂಗ್ರಹವಾಗುತ್ತವೆ. ಅಲ್ಯುಮಿನಿಯಂ ಶುದ್ಧೀಕರಣದ ಪ್ರಕ್ರಿಯೆಯಲ್ಲಿ ಈ ವಿಧಾನವನ್ನು ಅನುಸರಿಸಲಾಗುವುದು. ವಿದ್ಯುತ್ ರಾಸಾಯನಿಕ ಶ್ರೇಣಿಯ ಉನ್ನತ ಸ್ಥಾನ ಹಾಗೂ ಉನ್ನತ ಮಟ್ಟದ ವಿದ್ಯುತ್ ಧನತ್ವ ಇರುವ ಮೂಲವಸ್ತುಗಳ ತಯಾರಿಗೆ ಈ ವಿದ್ಯುತ್ ವಿಶ್ಲೇಷಣಾ ವಿಧಾನವನ್ನು ಉಪಯೋಗಿಸಲಾಗುವುದು.

ಲೋಹಗಳಿರಬಹುದು, ಮಿಶ್ರಲೋಹಗಳಿರಬಹುದು, ಅಥವಾ ಮೈಲುತುತ್ತು, ಡೋಬಿಖಾರ, ಅಡುಗೆಖಾರ, ಸಾಮಾನ್ಯ ಉಪ್ಪಿನಂತಹ ಲೋಹ ಯೌಗಿಕಗಳಿರಬಹುದು ನಮ್ಮ ಜೀವನದಲ್ಲಿ ಅವುಗಳೆಲ್ಲ ಹಾಸುಹೊಕ್ಕಾಗಿವೆ. ಇನ್ನು ಬೇರ್ಪಡಿಸುವುದು ಸುಲಭವಲ್ಲ, ಸಾಧ್ಯವೂ ಅಲ್ಲ.

11 March 2009

ಚಿತ್ರ ೦೭ - ನಿತಿನ್ ಎಂ. ಡಿ

ನಮ್ಮ ಬ್ಲಾಗ್ ವೀಕ್ಷಕರಲ್ಲಿ ಒಬ್ಬರಾದ ಸೌಮ್ಯಾ ಕಮೆಂಟ್ ಬರೆದಿದ್ದಾರೆ. ಅವರ ಅಭಿಪ್ರಾಯದಲ್ಲಿ ಕಥೆ, ಲೇಖನಗಳಿಂದಲೂ ಚಿತ್ರಗಳು ಚೆನ್ನಾಗಿ ಬರುತ್ತಿವೆ. ಅವರ ಅಭಿಪ್ರಾಯದಂತೆ, ನಮ್ಮಲ್ಲೂ ಸಾಕಷ್ಟು ಚಿತ್ರ ಸಂಗ್ರಹಗಳಿವೆ. ಈ ಬಾರಿಯ ಚಿತ್ರ ನಮ್ಮ ಶಾಲಾ ರಕ್ಷಕ - ಶಿಕ್ಷಕ ಸಂಘದ ಉಪಾಧ್ಯಕ್ಷ ದಿವಾಕರ ಮಾನ್ಯ ಇವರ ಪುತ್ರ ನಿತಿನ್ ಎಂ. ಡಿ ಬರೆದಿದ್ದು. ಹೇಗಿವೆ ನಮ್ಮ ಹುಡುಗರು ಬರೆದ ಚಿತ್ರಗಳು ?

ಮಾಧ್ಯಮಗಳ ಪ್ರಶಂಸೆ - ಹೆಚ್ಚಿದ ಜವಾಬ್ದಾರಿ

ಮಲಯಾಳ ಮನೋರಮಾದಲ್ಲಿ ನಮ್ಮ ಕುರಿತಾದ ವರದಿ ತೀರಾ ಅನಿರೀಕ್ಷಿತ. ಆ ವರದಿಯನ್ನು ಕಂಡು ಮನೋರಮಾ ನ್ಯೂಸ್ ಚಾನೆಲಿನ ವರದಿಗಾರರು ಮತ್ತು ಕ್ಯಾಮೆರಾಮೆನ್ ವಿಶೇಷ ಕಾರು ಮಾಡಿಕೊಂಡು ಕಾಸರಗೋಡಿನಿಂಡ ನಮ್ಮ ಹಳ್ಳಿಮೂಲೆಯ ನೀರ್ಚಾಲಿಗೆ ಭೇಟಿ ನೀಡುವುದು ಕನಸಿನಲ್ಲೂ ಗ್ರಹಿಸದ ವಿಚಾರ. ಊರಮಂದಿಗೆಲ್ಲ ಅಚ್ಚರಿ. ನಮ್ಮನ್ನು ಪ್ರಥಮವಾಗಿ ಗುರುತಿಸಿದ್ದು ಅಡಿಕೆ ಪತ್ರಿಕೆ, ಮತ್ತೆ ಕನ್ನಡ ಪ್ರಭದ ಬ್ಲಾಗಾಯಣ, ಚಿತ್ರದುರ್ಗದ ಸುದ್ದಿ ಗಿಡುಗ, ಪರ್ಯಾಯ ಬ್ಲಾಗ್ ಮತ್ತು ಉದಯವಾಣಿ ದಿನ ಪತ್ರಿಕೆ. ಉದಯವಾಣಿಯ ಸಂಪದ ಪುಟದಲ್ಲಿ ನಿಸ್ತಂತು ಸಂಚಾರ ಅಂಕಣದ ಮೂಲಕ ಹೊಚ್ಚಹೊಸ ತಂತ್ರಜ್ಞಾನ ಬೆಳವಣಿಗೆಯನ್ನು ಪರಿಚಯಿಸುವ ಅಶೋಕ್ ಕುಮಾರ್ ನಮ್ಮ ಬೆನ್ನು ತಟ್ಟಿದ್ದೂ ಬಹಳ ಹೆಮ್ಮೆಯ ವಿಚಾರ. ಹ್ಯಾಟ್ಸ್ ಆಫ್ ಟು ಯು ಆಲ್.....

ರಜೆ, ಬ್ಲಾಗ್ ಮತ್ತು ನಾವು

ಶನಿವಾರ ಮತ್ತು ಭಾನುವಾರ ನಮಗೆ ಮಾಮೂಲಿ ರಜೆ, ನಬಿದಿನ, ಹೋಳಿಗಳನ್ನು ಮುಗಿಸಿ ನಮ್ಮ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಸಜ್ಜಾಗುತ್ತಿದ್ದಾರೆ. ಇಂದಿನಿಂದ ಅವರಿಗೆ ಅಗ್ನಿ ಪರೀಕ್ಷೆ. ನಮಗೆ ಬೇರೆ ಶಾಲೆಗಳಲ್ಲಿ ಪರೀಕ್ಷೆ ನಡೆಸುವ ಜವಾಬ್ದಾರಿ. ಎಪ್ರಿಲ್, ಮೇ ತಿಂಗಳು ಬೇಸಿಗೆ ರಜಾ. ಈ ಮಧ್ಯೆ ಖಂಡಿತವಾಗಿಯೂ ಬಿಡುವು ಮಾಡಿಕೊಂಡು ಬ್ಲಾಗ್ ಬೆಳೆಸಿಕೊಳ್ಳುತ್ತೇವೆ ಎಂಬ ವಿಶ್ವಾಸ ನಮಗಿದೆ. ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತೇವೆ.

07 March 2009

ಕಥೆ ೦೪ - ಬುದ್ಧಿ ಕಲಿತ ಗೆಳೆಯರು

- ಮುರಳಿಕೃಷ್ಣ ಶರ್ಮ
ಕಿಟ್ಟು ತುಂಟ ಹುಡುಗ. ಚುರುಕು ಸ್ವಭಾವದ ಆತ ಒಂದುದಿನ ಶಾಲೆ ಬಿಟ್ಟು ಮನೆಗೆ ಹೋಗುವಾಗ ಕೆಸರಿನ ಕೊಳವೊಂದಕ್ಕೆ ಬಿದ್ದುಬಿಟ್ಟನು. ಆತನನ್ನು ಕಂಡು ಗೆಳೆಯರೆಲ್ಲಾ ತಮಾಷೆ ಮಾಡಿದರು.ಸೂಕ್ತ ಸಮಯಕ್ಕೆ ಕಾಯುತ್ತಿದ್ದ ಕಿಟ್ಟು ಮರುದಿನ ಶಾಲೆಯಿಂದ ಹಿಂತಿರುಗುವಾಗ ಗೆಳೆಯರನ್ನು ಅದೇ ಕೆಸರಗುಂಡಿಗೆ ದೂಡಿಹಾಕಿದನು. ಇದನ್ನು ತಿಳಿದ ಕಿಟ್ಟುವಿನ ಹೆತ್ತವರು ತುಂಬಾ ಬೇಸರಪಟ್ಟುಕೊಂಡರು. ಕಿಟ್ಟುವಿಗೆ ಸರಿಯಾಗಿ ಬುದ್ಧಿ ಹೇಳಿದರು.

06 March 2009

ಕಾರ್ಟೂನ್ ೦೨ - ಅವಿನಾಶ್. ಎಂ.

ಕಾರ್ಟೂನ್ ರಚನೆಯಲ್ಲಿ ನಮ್ಮ ವಿದ್ಯಾರ್ಥಿಗಳು ಸಿದ್ಧಹಸ್ತರೇನಲ್ಲ. ಆದರೂ ಪ್ರಯತ್ನ ಪಡುತ್ತಿದ್ದಾರೆ. ಈ ಕಾರ್ಟೂನ್ ಕಲ್ಲಕಟ್ಟದ ಬಳಿಯ ಹುಡುಗ ಅವಿನಾಶನ ರಚನೆ. ನಮ್ಮ ಚಿತ್ರಕಲಾ ಅಧ್ಯಾಪಕರ ಪ್ರಯತ್ನಗಳೂ ಸದ್ಯವೇ ತೆರೆ ಕಾಣಲಿವೆ. ನಮ್ಮ ಸ್ಕೇನರ್‌ಗೆ ಈಗ ಭರ್ತಿ ಕೆಲಸ. ವಿದ್ಯಾರ್ಥಿಗಳ ಪ್ರಯತ್ನ, ನಿಮ್ಮ ಪ್ರೋತ್ಸಾಹ ಹೀಗೆಯೇ ಮುಂದುವರಿಯಲಿ ಎಂಬುದಷ್ಟೇ ನಮ್ಮ ಅಪೇಕ್ಷೆ.

ಪ್ರಶಂಸೆ - ಮಲಯಾಳ ಮನೋರಮಾದಿಂದ


ಮಲಯಾಳ ಮನೋರಮಾದ ಕಣ್ಣೂರು ಮತ್ತು ಮಂಗಳೂರು ಆವೃತ್ತಿಗಳಲ್ಲಿ ನಮ್ಮ ಶಾಲೆಯ ಬ್ಲಾಗ್ ಬಗ್ಗೆ ಪ್ರಶಂಸಾತ್ಮಕ ವರದಿ ಪ್ರಕಟವಾಗಿದೆ. ಕಾಸರಗೋಡಿನ ಮಲಯಾಳ ಮನೋರಮಾ ಕಛೇರಿಯ ‘ಬ್ಯೂರೋ ಚೀಫ್’ ಸಿಬಿ ಜೋನ್ ಪ್ರತೇಕ ಆಸ್ಥೆ ವಹಿಸಿ ಬರೆದ ವರದಿ ಇದು. ಇಂದು ಮಧ್ಯಾನ ನಂತರ ‘ಮನೋರಮಾ ನ್ಯೂಸ್’ ಚಾನೆಲ್‌ನ ವರದಿಗಾರರು ಬರುತ್ತಿದ್ದಾರೆ. ಅವರಿಗಾಗಿ ತಯಾರಾಗಬೇಕಿದೆ. ಕೇರಳದಲ್ಲಿರುವ ಕನ್ನಡ ಶಾಲೆಯ ಕನ್ನಡ ಮಕ್ಕಳ ಬ್ಲಾಗಿಗೆ ಮಲಯಾಳದ ಮಾಧ್ಯಮದಿಂದ ಬರುತ್ತಿರುವ ಪ್ರಶಂಸೆ ಇದು ಎಂಬುದು ಗಮನಾರ್ಹ ಅಂಶ.

05 March 2009

ಚಿತ್ರದುರ್ಗದ ಪತ್ರಿಕೆಯಲ್ಲಿ ನಮ್ಮ ಬ್ಲಾಗ್


ನಮ್ಮ ಹಿತೈಷಿ, ಚಿತ್ರದುರ್ಗ ಆಕಾಶವಾಣಿಯ ಪ್ರಸಾರ ನಿರ್ವಹಕ ಬೇದ್ರೆ ಮಂಜುನಾಥ ನಮ್ಮ ಬ್ಲಾಗ್ ಕುರಿತಾದ ಮಾಹಿತಿಯನ್ನು ಚಿತ್ರದುರ್ಗದ ‘ಸುದ್ದಿ ಗಿಡುಗ’ ದಿನ ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ. ಬೇದ್ರೆ ಮಂಜುನಾಥ ಮತ್ತು ಲೇಖನ ಪ್ರಕಟಿಸಿದ ಪತ್ರಿಕೆ ನಮ್ಮ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ನಮಗೆ ದಾರಿದೀಪ ಎಂದು ಮತ್ತೊಮ್ಮೆ ಹೇಳಬಯಸುತ್ತೇವೆ. ಅನೇಕ ಮಂದಿ ಹಿತೈಷಿಗಳ ಒತ್ತಾಸೆಯ ಮೇರೆಗೆ ಹಿನ್ನೆಲೆ ಬಣ್ಣವನ್ನು ಬದಲಿಸಿದ್ದೇವೆ. ಬೇದ್ರೆ ಮಂಜುನಾಥರು ಮೊದಲಿನದ್ದೇ ಒಳ್ಳೆಯದಿತ್ತು ಎನ್ನುತ್ತಿದ್ದಾರೆ. ಮುಂದಿನ ನಡೆ, ಕಾದು ನೋಡಿ...

ಕಥೆ ೦೩ - ತಪ್ಪಿನ ಅರಿವು

- ಶ್ಯಾಮಲಾ. ಪಿ
ಒಂದು ಹಳ್ಳಿಯಲ್ಲಿ ರಾಮು ಎಂಬ ಹುಡುಗನಿದ್ದನು. ಅವನ ತಂದೆ ಆ ಹಳ್ಳಿಯ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಹಳ್ಳಿ ಶಾಲೆಗೆ ಹೋಗುತ್ತಿದ್ದ ರಾಮುವನ್ನು ಅವನ ತಾಯಿ ಸದಾ ಪ್ರೋತ್ಸಾಹಿಸುತ್ತಿದ್ದರು. ಅವನಿಗೆ ಒಂದು ಪತ್ರಿಕೆಯ ಮೂಲಕ ಪಟ್ಟಣದ ಆಧುನಿಕ ಜೀವನದ ಬಗ್ಗೆ ತಿಳಿಯಿತು. ಅವನಿಗೆ ಅಲ್ಲಿಗೆ ಹೋಗಬೇಕೆಂದಾಯಿತು. ಯಾರಲ್ಲೂ ತಿಳಿಸದೆ ಒಂದು ರಾತ್ರಿ ಸ್ವಲ್ಪ ದುಡ್ಡು ಎತ್ತಿಕೊಂಡು ರಾಮು ಮನೆಯಿಂದ ಓಡಿಹೋದನು. ಬಸ್ಸಿಳಿದು ಪೇಟೆಯಲ್ಲಿ ನಡೆಯುತ್ತಿದ್ದಾಗ ಕಳ್ಳರು ಅವನ ಕೈಯಲ್ಲಿದ್ದ ದುಡ್ಡನ್ನು ದೋಚಿಕೊಂಡರು. ಅವನಿಗೆ ಸಹಾಯ ಮಾಡುವವರು ಯಾರೂ ಇರಲಿಲ್ಲ. ಊಟತಿಂಡಿಗೂ ಪರದಾಡಬೇಕಾಗಿ ಬಂತು. ತನ್ನ ತಪ್ಪಿನ ಅರಿವಾಗಿ ಆತನ ಕಣ್ಣಿನಲ್ಲಿ ಬೇಸರದ ಹನಿಗಳು ಜಿನುಗಿದವು.

04 March 2009

ಚಿತ್ರ ೦೬ - ಅವಿತೇಶ. ಬಿ

ಈ ಬಾರಿಯ ಚಿತ್ರ ಒಂಭತ್ತನೇ ತರಗತಿಯ ಅವಿತೇಶನ ಕಲಾಕೃತಿ. ಚೆನ್ನಾಗಿದೆ. ಅವಿತೇಶನ ಕೈ ಕೆಲವೊಮ್ಮೆ ಕಾರ್ಟೂನ್ ರಚನೆಯ ಕಡೆಗೂ ಓಡುತ್ತದೆ. ಓದುವುದರಲ್ಲೂ ಮುಂದಿರುವ ಈತ ಪ್ರತಿಭಾವಂತ ಹುಡುಗ.

ಪ್ರಬಂಧ ೦೪ - ರೋಕೆಟ್ ಮೇಲೆ ಹಾರುವುದು ಹೇಗೆ?

-ಶ್ರೀನಿವಾಸ. ಎಚ್.ಎನ್

ರೋಕೆಟ್‌ಗಳು ನಿರ್ವಾತ ಪ್ರದೇಶಗಳಲ್ಲೂ ಸಂಚರಿಸುತ್ತವೆ. ಇವುಗಳಲ್ಲಿ ಮುಖ್ಯವಾಗಿ ಎರಡು ಕೊಳವೆಗಳನ್ನು ಒಂದರೊಳಗೊಂದರಂತೆ ಅಭಿಮುಖವಾಗಿ ಜೋಡಿಸಲಾಗಿದೆ. ಒಳಗಿನ ಕೊಳವೆಯು ತನ್ನ ದ್ವಾರದತ್ತ ಕಿರಿದಾಗುತ್ತಾ ಸಾಗುತ್ತದೆ. ಘನರೂಪದ ದಹ್ಯವಸ್ತುಗಳನ್ನು ರೋಕೆಟ್ಟುಗಳಲ್ಲಿ ಇಂಧನವಾಗಿ ಉಪಯೋಗಿಸಲಾಗುತ್ತದೆ.

03 March 2009

ಚಿತ್ರ ೦೫ - ನಮೃತಾ ಎಂ.ಎಸ್


ಮತ್ತೆ ಚಿತ್ರಗಳನ್ನು ಕಣ್ಣಮುಂದೆ ಹರವಿ ಕುಳಿತುಕೊಂಡಿದ್ದೇವೆ. ಎಲ್ಲವೂ ಭಿನ್ನ. ನಮೃತಾ ಎಂ.ಎಸ್. ಬಿಡಿಸಿದ ಇನ್ನೊಂದು ಚಿತ್ರ ಈಗ ನಿಮ್ಮ ಮುಂದಿದೆ. ಇನ್ನಷ್ಟು ಚಿತ್ರಗಳು ಇನ್ನೊಮ್ಮೆ.

01 March 2009

ಬನ್ನಿ, ಬ್ಲಾಗಿಂಗ್ ಲೋಕಕ್ಕೆ



ಮಾರ್ಚ್ ತಿಂಗಳ ಅಡಿಕೆ ಪತ್ರಿಕೆಯಲ್ಲಿ ಬ್ಲಾಗಿಂಗ್‌ನ ಬಗ್ಗೆ ಮಾಹಿತಿ ಪೂರ್ಣ ಲೇಖನವಿದೆ. ಈ ಲೇಖನದಲ್ಲಿ ನಮ್ಮ ಬ್ಲಾಗ್ ಕುರಿತಾದ ಉಲ್ಲೇಖವಿದೆ, ಪ್ರಶಂಸೆಯಿದೆ. ಧನ್ಯವಾದಗಳು, ಲೇಖನ ಬರೆದ ವಸಂತ ಕಜೆ ಇವರಿಗೆ, ಪ್ರಕಟಿಸಿದ ಅಡಿಕೆ ಪತ್ರಿಕೆಗೆ.