Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

31 December 2009

ಹೊಸ ವರುಷ ತರಲಿ ಹೊಸ ಹರುಷ

೨೧ನೇ ಶತಮಾನದ ಹೊಸ ದಶಕವನ್ನು ಪ್ರವೇಶಿಸುತ್ತಿದ್ದೇವೆ. ನೆಮ್ಮದಿ, ಶಾಂತಿ, ಸಹಬಾಳ್ವೆಯ ಹೊಸ ಮನ್ವಂತರವನ್ನು ನಿರೀಕ್ಷಿಸುತ್ತಾ ಹೊಸ ವರುಷವನ್ನು ಸ್ವಾಗತಿಸೋಣ. ನಮ್ಮ ಎಲ್ಲ ಹಿತೈಷಿಗಳಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

26 December 2009

ಕಾಸರಗೋಡು ಜಿಲ್ಲಾ ಯುವಜನೋತ್ಸವ ಮತ್ತು ಕನ್ನಡ ಸಾಹಿತ್ಯ ಸಮ್ಮೇಳನ, ಬನ್ನಿ..

ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡು ಘಟಕ ಕಾಸರಗೋಡು ಇದರ ಆಶ್ರಯದಲ್ಲಿ ೨೦೧೦ನೇ ಜನವರಿ ೯ ಮತ್ತು ೧೦ರಂದು ಜಿಲ್ಲಾ ಯುವಜನೋತ್ಸವ ಮತ್ತು ಕನ್ನಡ ಸಾಹಿತ್ಯ ಸಮ್ಮೇಳನವನ್ನು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯಲ್ಲಿ ನಡೆಸಲು ತೀರ್ಮಾನಿಸಿದ್ದು ಅದಕ್ಕಾಗಿ ನಾಡಿನ ಹಿರಿಯ ಖ್ಯಾತ ವಿದ್ವಾಂಸರಾದ ಶ್ರೀ ಖಂಡಿಗೆ ಶಾಮ ಭಟ್ಟರ ಗೌರವಾಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿಯನ್ನು ರೂಪೀಕರಿಸಿ ಕಾರ್ಯಪ್ರವೃತ್ತರಾಗಿರುವ ವಿಚಾರ ಕಾಸರಗೋಡಿನ ಕನ್ನಡಾಭಿಮಾನಿಗಳಿಗೆ ಸಂತಸ ತಂದಿದೆ.
ಕನ್ನಡ ಮಾಧ್ಯಮದ ಬಾಲವಾಡಿಯಿಂದ ಪದವಿ ತನಕದ ವಿದ್ಯಾರ್ಥಿಗಳಿಗಾಗಿ ಕನ್ನಡ ಸಂಸ್ಕೃತಿಗೆ ಸಂಬಂಧಿಸಿದ ವಿಷಯಗಳಲ್ಲಿ ಸ್ಪರ್ಧೆ ನಡೆಯಲಿದೆ. ಸುಮಾರು ೧೫೦೦ ಮಂದಿ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಾಡಿನ ಹಿರಿಯ ವಿದ್ವಾಂಸರೂ ಖ್ಯಾತ ಯಕ್ಷಗಾನ ಅರ್ಥಧಾರಿಗಳೂ ನಿವೃತ್ತ ಅಧ್ಯಾಪಕರೂ ಆದ ಶ್ರೀ ಪೆರ್ಲ ಕೃಷ್ಣ ಭಟ್ಟರು ಆಯ್ಕೆಯಾಗಿರುವುದು ತುಂಬ ಸಂತಸದ ವಿಷಯ. ಸಮ್ಮೇಳನದ ಉದ್ಘಾಟನೆಯನ್ನು ಉಡುಪಿಯ ಖ್ಯಾತ ವಿದ್ವಾಂಸ ಶ್ರೀ ಬನ್ನಂಜೆ ಗೋವಿಂದಾಚಾರ್ಯರು ನಡೆಸಲಿದ್ದು ಹಾಸ್ಯಗೋಷ್ಟಿ, ಕವಿಗೋಷ್ಟಿ, ಭಾಷಾ ಸೌಹಾರ್ದ ಗೋಷ್ಟಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಮ್ಮೇಳನ ಸಂಪನ್ನವಾಗಲಿದೆ.
ಕಾಸರಗೋಡಿನ ಕನ್ನಡಕ್ಕೆ ಕಂಪು ಇದೆ, ಇಂಪು ಇದೆ, ತನ್ನತನವಿದೆ. ಕರ್ನಾಟಕದ ಗಣ್ಯವ್ಯಕ್ತಿಗಳೆಲ್ಲ ಕಾಸರಗೋಡನ್ನು ಸಂದರ್ಶಿಸಿದಾಗಲೆಲ್ಲ ಇಲ್ಲಿಯ ಕನ್ನಡ ಚಟುವಟಿಕೆಗಳ ಕುರಿತು ಭಾಷಾ ಶುದ್ಧತೆಯ ಕುರಿತು ಪ್ರಶಂಸೆಯ ಮಾತುಗಳನ್ನು ಹೇಳುತ್ತಾರೆ. ಅದು ಈ ನೆಲದ ಕನ್ನಡ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತದೆ. ಶ್ರೀ ಕ್ಷೇತ್ರ ಅನಂತಪುರದ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಭೇಟಿ ಇತ್ತಾಗ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಈ ನೆಲದ ಕನ್ನಡ ಭಾಷೆಯ ಅಚ್ಚತನದ ಕುರಿತು ಪ್ರಶಂಸೆಯ ಮಾತುಗಳನ್ನಾಡಿರುವುದು ಖಂಡಿತವಾಗಿಯೂ ಕನ್ನಡಿಗರಿಗೆ ಪ್ರೋತ್ಸಾಹಕರ. ಕಾಸರಗೋಡಿನಲ್ಲಿ ಕನ್ನಡ ನಶಿಸಿಹೋಗುತ್ತಿದೆ ಎನ್ನುವಂತಹ ಕೂಗು ಕೇಳಿಸುತ್ತಿರುವ ಈ ಸಂದರ್ಭದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ. ಎಲ್ಲ ಸಹೃದಯರೂ ಸಹರಿಸಬೇಕಾಗಿ ಕೇಳಿಕೊಳ್ಳುತ್ತೇವೆ.

24 December 2009

ಕ್ರಿಸ್ಮಸ್ ಹಬ್ಬದ ಶುಭಾಶಯಗಳು..

ನಾಳೆ ಕ್ರಿಸ್ಮಸ್. ನಮ್ಮ ಪ್ರೀತಿಯ ಓದುಗರಿಗೆ ಕ್ರಿಸ್ಮಸ್ ಹಬ್ಬದ ಶುಭಾಶಯಗಳು.


23 December 2009

ನಮಗೆ ಕ್ರಿಸ್ಮಸ್ ರಜೆ...

ಕ್ರಿಸ್ಮಸ್ ರಜೆ ಆರಂಭವಾಗಿದೆ, ನಾಡಿದ್ದು ೨೮ಕ್ಕೆ ಶಾಲೆ ಪುನಃ ತೆರೆಯಲಿದೆ. ಈ ಮಧ್ಯೆ ಜಿಲ್ಲಾ ಮಟ್ಟದ ಕಲೋತ್ಸವ ಸ್ಪರ್ಧೆಗಳಿಗೆ ಆಯ್ಕೆಯಾದವರು ಮತ್ತು ರಾಜ್ಯ ಮಟ್ಟದ ವಿಜ್ಞಾನ ಮೇಳಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ತಯಾರಿಯಲ್ಲಿ ಮಗ್ನರಾಗಿದ್ದಾರೆ. ಅಂದ ಹಾಗೆ ಕಳೆದ ವಾರ ಅಡೂರಿನಲ್ಲಿ ಜರಗಿದ ಕುಂಬಳೆ ಉಪಜಿಲ್ಲಾ ಮಟ್ಟದ ಕಲೋತ್ಸವ ಸ್ಪರ್ಧೆಗಳಲ್ಲಿ ನಮ್ಮ ವಿದ್ಯಾರ್ಥಿಗಳು ಭಾಗವಹಿಸಿ ಅನೇಕ ಬಹುಮಾನಗಳನ್ನು ಪಡೆದು ಸಂಸ್ಕೃತೋತ್ಸವ ಯುಪಿ ವಿಭಾಗ ಚಾಂಪಿಯನ್, ಹೈಸ್ಕೂಲು ವಿಭಾಗ ಚಾಂಪಿಯನ್ ಮತ್ತು ಸಂಸ್ಕೃತೋತ್ಸವ ಸಮಗ್ರ ಪ್ರಶಸ್ತಿಗಳನ್ನು ಶಾಲೆಗೆ ತಂದಿದ್ದಾರೆ. ಸಂಸ್ಕೃತ ಎಂಬ ಶಾಲೆಯ ಹೆಸರಿಗೆ ಅರ್ಥ ತಂದಿದ್ದಾರೆ. ಈ ಸಾಧನೆ ನಮ್ಮ ಶಾಲೆ ನಿರಂತರವಾಗಿ ಕಳೆದ ಮೂರ್ನಾಲ್ಕು ವರ್ಷಗಳಿಂದ ನಡೆಸುತ್ತಿದೆ. ಈ ಜೈತ್ರಯಾತ್ರೆ ಹೀಗೆಯೇ ಮುಂದುವರಿಯುತ್ತಿರಲಿ,ಎಂದು ದೇವರಲ್ಲಿ ಬೇಡಿಕೊಳ್ಳುತ್ತೇವೆ.

18 December 2009

ಪದ್ಯ - ಅಮ್ಮಾ ಪ್ಲೀಸಮ್ಮಾ-ಶ್ರೀವಾಣಿ.ಕೆ.

ಅಮ್ಮಾ ಅಮ್ಮಾ ಟೀವಿಯನಿಡುವೆ
ಕಾರ್ಟೂನ್ ಇದೆಯಮ್ಮಾ
ಐದು ಕಾಲದು ಚಿಂಟು ಟಿವಿಲಿ
ನೋಡಲೆಬೇಕಮ್ಮಾ
ನೋ,ನೋ ಎನ್ನುತ ಬಂದಳು ಅಮ್ಮ
ಎಂದಳು ಬೇಡ ಮಗಾ
ಗಣಿತದ ಎಕ್ಸಾಮ್ ಇಲ್ಲವೆ ನಾಳೆ
ಓದದು ಹೋಗೀಗ
ಓದುವೆ ಟಿವಿಯ ನೋಡಿದ ಬಳಿಕ
ಅಮ್ಮಾ ಪ್ಲೀಸಮ್ಮಾ
ಈಗದು ಕಾರ್ಟೂನ್ ನೋಡುವ ಆಸೆ
ನನಗದು ಕೇಳಮ್ಮಾ
ಗದರುತ ತಾಯಿಯು ಹೇಳಿದೆನಲ್ಲ
ಪಾಠವನೋದೀಗ
ಅಲ್ಲದೆ ಟಿವಿಯ ನೋಡಲು ಬಿಡೆನು
ಅಪ್ಪಗೆ ಹೇಳುವೆ ಆಗ.

16 December 2009

ನಮ್ಮ ಪ್ರಯಾಣ ರಾಜ್ಯ ಮಟ್ಟಕ್ಕೆ...

ಉತ್ಸವಗಳ ಕಾಲ ನಮ್ಮ ಪಾಲಿಗೆ ಶುಭದಾಯಕವಾಗುವ ಲಕ್ಷಣವಿದೆ. ಇತ್ತೀಚೆಗೆ ತೃಕ್ಕರಿಪುರದಲ್ಲಿ ಜರಗಿದ ಕಾಸರಗೋಡು ಜಿಲ್ಲಾ ಮಟ್ಟದ ವೃತ್ತಿಪರಿಚಯ ಮತ್ತು ವಿಜ್ಞಾನ ಮೇಳದಲ್ಲಿ ಭಾಗವಹಿಸಿ ಬಹುಮಾನ ಪಡೆದ ಪ್ರತಿಭೆಗಳು ಈ ತಿಂಗಳ ಕೊನೆಗೆ ತ್ರಿಶ್ಶೂರಿನಲ್ಲಿ ಜರಗುವ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ. ವೃತ್ತಿ ಪರಿಚಯ ಮೇಳದ ಅಗರಬತ್ತಿ ತಯಾರಿಯಲ್ಲಿ ವಿದ್ಯಾ.ಕೆ.ಎಂ, ಇಲೆಕ್ಟ್ರೋನಿಕ್ಸ್ ನಲ್ಲಿ ಗೋವಿಂದ ಪ್ರಕಾಶ್, ಕೊಡೆ ತಯಾರಿಯಲ್ಲಿ ಮನೋಜ್, ಬುಕ್ ಬೈಂಡಿಂಗ್ ಸ್ಪರ್ಧೆಯಲ್ಲಿ ಸುಷ್ಮಿತಾ.ಬಿ ಹಾಗೂ ವಿಜ್ಞಾನ ಮೇಳದಲ್ಲಿ ಮಾನಸ ಪಿ.ಎಸ್ ಮತ್ತು ಸುಷ್ಮಿತಾ ಶೆಟ್ಟಿ ಚಾಲಿತ ಯಂತ್ರಗಳ ವಿಭಾಗದಲ್ಲಿ ಸೈಕಲ್ ಎನರ್ಜಿ ಎಂಬ ಉಪಕರಣವನ್ನು ಪ್ರದರ್ಶಿಸಲಿದ್ದಾರೆ, ಎಲ್ಲರಿಗೂ ನಮ್ಮ ಶುಭಾಶಯಗಳು.

14 December 2009

ಚುಟುಕುಗಳು

ಝೀರೋ ವೇಸ್ಟ್ - ಹಿತೇಶ್ ಕುಮಾರ್ ಎಂ.

ಪಂಚಾಯತಿನ ಒಂದು ಅಭಿಯಾನ
ಝೀರೋ ವೇಸ್ಟ್
ಇದು ಕಂಡು ಹೇಳಿದರು ಕೆಲವರು
ಇದು ಬಹಳ ವೇಸ್ಟ್

ಮೊಬೈಲು - ವನಿತ ಕುಮಾರಿ. ಸಿ.ಎಚ್

ಚಿಕ್ಕ ಮಕ್ಕಳ ಕೈಯಲ್ಲಿ ಮೊಬೈಲ್
ಅದುಮಿ ಮಾಡುತ್ತಾರೆ ಸ್ಟೈಲ್
ರೇಂಜ್ ಇಲ್ಲ ಹತ್ತುತ್ತಾರೆ ಗುಡ್ಡ
ಕೆಳಗೆ ಬಿದ್ದು ಗುಳಿಬೀಳುತ್ತದೆ ಗಡ್ಡ.

11 December 2009

ಕ್ಷಮಿಸಿ...

ಕೆಲವಾರು ದಿನಗಳಿಂದ ನಮ್ಮ ಶಾಲೆಯ ಮೋಡೆಮ್ ಕೆಟ್ಟು ಹೋಗಿತ್ತು. ಇವತ್ತು ಸರಿಪಡಿಸಲಷ್ಟೇ ಸಾಧ್ಯವಾಯಿತು. ಹಳ್ಳಿ ಶಾಲೆ ಎಂದ ಮೇಲೆ ಇದೆಲ್ಲಾ ಸಹಜ ಅಂದುಕೊಂಡಿದ್ದೇವೆ, ಮುಂದೆ ಈ ರೀತಿ ಆಗದಿರಲಿ ಎಂದು ಪ್ರಾರ್ಥಿಸಿಕೊಳ್ಳುತ್ತೇವೆ. ವಿವಿಧ ಕಲೋತ್ಸವ, ವಿಜ್ಞಾನ ಮೇಳಗಳಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳು ಪ್ರಶಸ್ತಿ ಪಡೆದಿದ್ದಾರೆ. ಅದರ ವರದಿಯೊಂದಿಗೆ ನಿಮ್ಮೆದುರು ಬೇಗ ಬರುತ್ತೇವೆ, ಪ್ರೀತಿ ಇರಲಿ...