Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

28 July 2010

ಕೂಳಕ್ಕೋಡ್ಲು ಮಹೇಶ್‌ಗೆ ಡಾಕ್ಟರೇಟ್

ನಮ್ಮ ಶಾಲೆಯ ಪೂರ್ವ ವಿದ್ಯಾರ್ಥಿ, ಕಾಸರಗೋಡಿನ ಬದಿಯಡ್ಕ ಬಳಿಯ ಕೂಳಕ್ಕೋಡ್ಲು ಈಶಾವಾಸ್ಯಂ ಮನೆಯ ಹುಡುಗ ಸಂಸ್ಕೃತ ಲೋಕದಲ್ಲಿ ಉತ್ತಮ ಸಾಧನೆಗೈದು ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಸುಲೋಚನಾ-ಶಂಕರನಾರಾಯಣ ಭಟ್ಟ ದಂಪತಿಯರ ಪುತ್ರ ೨೯ ವರ್ಷದ ಯುವ ಸಂಶೋಧಕ ಮಹೇಶ್ ಕೂಳಕ್ಕೋಡ್ಲು ಈ ಸಾಧನೆಗೈದ ಪ್ರತಿಭಾವಂತ.

‘ಎ ಕ್ರಿಟಿಕಲ್ ಸ್ಟಡಿ ಓಫ್ ಸಿದ್ಧಾಂತ ದರ್ಪಣ ಓಫ್ ನೀಲಕಂಠ ಸೋಮಯಾಜಿ’ ಎಂಬ ಶೀರ್ಷಿಕೆಯ ಮಹಾ ಪ್ರಬಂಧವನ್ನು ಮುಂಬಯಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರಾಚಾರ್ಯ ಶ್ರೀ ರಾಮಸುಬ್ರಹ್ಮಣ್ಯಂ ಮಾರ್ಗದರ್ಶನದಲ್ಲಿ ಬರೆದಿರುವ ಮಹೇಶ್ ಈ ಮಹಾ ಪ್ರಬಂಧವನ್ನು ಮುಂಬಯಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಸಲ್ಲಿಸಿ ಡಾಕ್ಟರೇಟ್ ಪದವಿಗೆ ಪಾತ್ರರಾಗಿದ್ದಾರೆ. ಸಂಸ್ಕೃತದಲ್ಲಿರುವ ವಿಜ್ಞಾನ ವಿಷಯವನ್ನು ಆಧರಿಸಿ ಸಿದ್ಧವಾದ ಮೊದಲ ಪಿಎಚ್‌ಡಿ ಇದು ಎಂಬುದು ಈ ಪದವಿಯ ಗೌರವವನ್ನು ಹೆಚ್ಚಿಸುತ್ತದೆ.

ಸಂಸ್ಕೃತದಲ್ಲಿರುವ ಈ ಸಿದ್ಧಾಂತ-ದರ್ಪಣ ಗ್ರಂಥ ಭಾರತೀಯ ಖಗೋಳ ಶಾಸ್ತ್ರದ ಕೆಲವು ನಿಯಮಗಳನ್ನು ಉಲ್ಲೇಖಿಸುತ್ತದೆ. ಇದನ್ನು ರಚಿಸಿದ ವಿಜ್ಞಾನಿ ಕೇರಳದ ತ್ರಿಕ್ಕಂಟಿಯೂರಿನ ನೀಲಕಂಠ (೧೫ ನೆ ಶತಮಾನ), ನಮ್ಮ ದೇಶ ಕಂಡ ಒಬ್ಬ ಅತ್ಯಂತ ಮೇಧಾವೀ ಗಣಿತ-ಖಗೋಳಜ್ಞ. ಈ ಗ್ರಂಥದ ಭಾಷೆ, ವ್ಯಾಖ್ಯಾನ, ವಿಷಯ ಪ್ರಸ್ತುತಿಯ ಶೈಲಿ ಎಲ್ಲವೂ ಅದ್ಭುತ. ಒಬ್ಬ ವಿಜ್ಞಾನಿಗೆ ಇರಬೇಕಾದ ದೃಷ್ಟಿ, ಒಬ್ಬ ಶಿಕ್ಷಕ ವಿದ್ಯಾರ್ಥಿಗೆ ಹೇಳಬೇಕಾದ ಹಿತವಚನಗಳ ಸಂಗ್ರಹ ಈ ಗ್ರಂಥದಲ್ಲಿದೆ. ಭಾರತೀಯ ವಿಜ್ಞಾನ/ಗಣಿತದಲ್ಲಿ ಉಪಪತ್ತಿ (ಪ್ರೂಫ್)- ಮತ್ತು ವೈಚಾರಿಕ ಚಿಂತನೆಗೆ ಎಷ್ಟು ಮಹತ್ತ್ವ ನೀಡಲಾಗಿದೆ ಎನ್ನುವುದು ಕೂಡಾ ಈ ಗ್ರಂಥದಲ್ಲಿ ವ್ಯಕ್ತವಾಗುತ್ತದೆ. ಭಾರತದ ಗ್ರಂಥಗಳಲ್ಲಿ ಪ್ರೂಫ್ ಇಲ್ಲ ಎಂಬ ಒಂದು ಮಿಥ್ಯಾ ಆರೋಪ ವಿದೇಶೀಯರಲ್ಲಿರುವುದರಿಂದ ಈ ಗ್ರಂಥಕ್ಕೆ ಅಪಾರ ಮಹತ್ವವಿದೆ.

ಮಹೇಶ್ ಈ ಗ್ರಂಥದ ಸಂಪೂರ್ಣ ಆಂಗ್ಲ ಭಾಷಾಂತರ ಮಾಡಿದ್ದಾರೆ ಮತ್ತು ಅಗತ್ಯ ವಿವರಣೆಗಳನ್ನೂ ಆಂಗ್ಲ ಭಾಷೆಯಲ್ಲಿ ನೀಡಿದ್ದಾರೆ. ಸೂಕ್ತ ಆಧುನಿಕ ಗಣಿತ ವಿವರಣೆ, ಅಗತ್ಯ ಚಿತ್ರಗಳನ್ನೂ ಸೇರಿಸಿದ್ದಾರೆ. ಗ್ರಹ-ಭ್ರಮಣ ಸಿದ್ಧಾಂತ (ಥಿಯರಿ ಓಫ್ ಪ್ಲಾನೆಟರಿ ಮೋಷನ್) ದ ಬೆಳವಣಿಗೆಯಲ್ಲಿ ಗ್ರಂಥದ ಕೊಡುಗೆ ಇತ್ಯಾದಿ ಮಹತ್ತ್ವ ಪೂರ್ಣ ವಿಷಯದ ಕುರಿತು ಪ್ರತಿಪಾದಿಸಿದ್ದಾರೆ. ಭಾರತದಲ್ಲಿ ಆದ ವಿಜ್ಞಾನದ ಬೆಳವಣಿಗೆಯ ಇತಿಹಾಸ ತಿಳಿಯಲು ಹಾಗೂ ನಮ್ಮ ಪೂರ್ವಜರ ಕೊಡುಗೆಯ ಮಹತ್ತ್ವ ತಿಳಿಯಲು ಈ ಅಧ್ಯಯನ ಸಹಕಾರಿ ಆಗಲಿದೆ.

ನಮ್ಮ ಸಂಸ್ಕೃತಿಯ ಆಧಾರವಾದ ಸಂಸ್ಕೃತ ಭಾಷೆಯ ಪ್ರಪಂಚದೆಲ್ಲೆಡೆ ಇರುವ ಅಭಿಮಾನದ ದ್ಯೋತಕವೇ ವಿಶ್ವ ಸಂಸ್ಕೃತ ಸಮ್ಮೇಳನ. ಈ ಸಮ್ಮೇಳನ ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುತ್ತದೆ. ಸೆಪ್ಟೆಂಬರ್ ೧-೫, ೨೦೦೯ ದ ತನಕ ೧೪ನೆಯ ವಿಶ್ವ ಸಂಸ್ಕೃತ ಸಮ್ಮೇಳನ ಜಪಾನಿನ ಕ್ಯೋಟೋ ವಿಶ್ವವಿದ್ಯಾಲಯದಲ್ಲಿ ನಡೆದಿತ್ತು. ಈ ವಿಶ್ವ ವಿದ್ಯಾಲಯದಲ್ಲಿ ಭಾರತೀಯ ಗಣಿತ-ಖಗೋಳಶಾಸ್ತ್ರದ ಬಗ್ಗೆಯೂ ಸಂಶೋಧನೆ-ಅಧ್ಯಯನ ನಡೆಯುತ್ತಿದೆ. ಇಂತಹ ಅತ್ಯಪೂರ್ವ ಸಮ್ಮೇಳನದಲ್ಲಿ ಸಂಸ್ಕೃತದಲ್ಲಿರುವ ವಿಶಾಲವಾದ ಜ್ಞಾನ ವಿಜ್ಞಾನ ಶಾಖೆಗಳ ಬಗ್ಗೆ ಆಯಾಯ ಕ್ಷೇತ್ರಗಳಲ್ಲಿ ಪರಿಶ್ರಮ ಮಾಡಿದವರಿಂದ ವಿಚಾರ ಮಂಡನೆ ಗಳು ಮಾಡಲ್ಪಟ್ಟಿದ್ದವು. ಸುಮಾರು ೩೫೦ ಪ್ರಸ್ತುತಿಗಳು ೧೫ ಗೋಷ್ಠಿ ಗಳಲ್ಲಿ ೫ ದಿನಗಳ ಕಾಲ ನಡೆದಿದ್ದವು. ೩೫ ದೇಶಗಳಿಂದ ಬಂದ ಸಂಸ್ಕೃತ ವಿದ್ವಾಂಸರು, ಶೋಧ ವಿದ್ಯಾರ್ಥಿಗಳು, ಅಭಿಮಾನಿಗಳ ಒಟ್ಟು ಸಂಖ್ಯೆ ಸುಮಾರು ೫೦೦. ಇಂತಹ ಅಪೂರ್ವ ಸಮ್ಮೇಳನದಲ್ಲ್ಲಿ ಸಂಸ್ಕೃತ ಮತ್ತು ವೈಜ್ಞಾನಿಕ ಸಾಹಿತ್ಯ ಎಂಬ ಗೋಷ್ಠಿಯಲ್ಲಿ ‘ಶ್ಯೇನ ಚಿತಿ’ ಎಂಬ ಒಂದು ವಿಚಾರವನ್ನು ಮಹೇಶ ಕೂಳಕ್ಕೋಡ್ಲು ಪ್ರಸ್ತುತ ಪಡಿಸಿ ವಿದ್ವಾಂಸರ ಪ್ರಶಂಸೆಗೆ ಪಾತ್ರರಾಗಿದ್ದರು.

ವಿಶ್ವದ ಗಣಿತದ ಇತಿಹಾಸವನ್ನು ತಿಳಿಯುವುದರಲ್ಲಿ ಅತ್ಯಂತ ಆವಶ್ಯಕವಾಗಿರುವುದು ಸಂಸ್ಕೃತದ ಗ್ರಂಥಗಳ ಪರಿಶೀಲನೆ. ಕ್ರಿ.ಪೂ. ೮೦೦ ಗಿಂತಲೂ ಹಿಂದಿನದಾದ ಶುಲ್ಬಸೂತ್ರ ಗಳಲ್ಲಿ ಯಜ್ಞ ವೇದಿಕೆಗಳ ನಿರ್ಮಾಣಕ್ಕೆ ಸಂಬಂಧಿಸಿದ ರೇಖಾಗಣಿತದ ಮಾಹಿತಿ ದೊರೆಯುತ್ತದೆ. ಶ್ಯೇನ ಚಿತಿ ಎಂಬುದು ಗಿಡುಗ ಪಕ್ಷಿಯಾಕಾರದ ಒಂದು ಯಜ್ಞ ವೇದಿಕೆ. ಇದರ ನಿರ್ಮಾಣದಲ್ಲಿ ಬಳಸಬೇಕಾದ ಇಟ್ಟಿಗೆಗಳ ನಿರ್ಮಾಣ ಕ್ರಮ, ಆಕಾರ, ವಿನ್ಯಾಸ ಕ್ರಮ ಇತ್ಯಾದಿ ವಿಚಾರಗಳು ಅಲ್ಲಿ ಉಲ್ಲಿಖಿತವಾಗಿವೆ. ರೇಖಾಗಣಿತದ ದೃಷ್ಟಿಯಿಂದ, ವಿನ್ಯಾಸಕ್ರಮದ ರೀತಿಯಿಂದ ಇದರ ಮಹತ್ತ್ವವೇನು ಎಂಬುದರ ಬಗ್ಗೆ ಮಾಹಿತಿ ನೀಡುವಂತಹ ಚಿತ್ರಗಳ-ಸ್ಲೈಡ್ ಶೋ ಸಹಿತವಾದ ಭಾಷಣವನ್ನು ಕೂಳಕ್ಕೋಡ್ಳು ಮಹೇಶ್ ಮಾಡಿದ್ದರು.


ನ್ಯೂಟನ ನಿಗಿಂತ ಸುಮಾರು ೨೦೦ ವರ್ಷಗಳ ಹಿಂದೆ ಭಾರತದಲ್ಲಿ ದ್ವಿಪದ ವಿಸ್ತರಣೆ (ಬೈನೋಮಿಯಲ್ ಎಕ್ಸ್‌ಪಾನ್ಶನ್) ಯ ವಿಚಾರ ಕ್ರಿಯಾಕ್ರಮಕರೀ ಎಂಬ ಗಣಿತ ಗ್ರಂಥದಲ್ಲಿ ಉಲ್ಲೇಖವಾಗಿರುವುದನ್ನು ಆಧಾರಸಹಿತವಾಗಿ ತೋರಿಸುವ ಒಂದು ಭಾಷಣವನ್ನು (ಟರ್ನಿಂಗ್ ಏನ್ ಆಲ್ಜೀಬ್ರಿಕ್ ಎಕ್ಸ್‌ಪ್ರೆಷನ್ ಇನ್ ಟು ಏನ್ ಇನ್‌ಫೈನೈಟ್ ಸೀರೀಸ್ - ಏನ್ ಇಂಡಿಯನ್ ಕೋಂಟ್ರಿಬ್ಯೂಷನ್) ಅವರು ಕಳೆದ ವರ್ಷಾರಂಭದಲ್ಲಿ ಬೆಲ್ಜಿಯಂ ದೇಶದ ಬ್ರಸ್ಸೆಲ್ಸ್ ವಿಶ್ವವಿದ್ಯಾಲಯದಲ್ಲಿ ಮಾಡಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದರು.

ಭಾರತೀಯ ವಿಜ್ಞಾನದ ಬಗ್ಗೆ ಅಧ್ಯಯನ ಕಾರ್ಯ ನಿರತರಾಗಿದ್ದಾರೆ. ಇವರು ಉಜಿರೆಯ ಶ್ರೀ ಮಂಜುನಾಥೇಶ್ವರ ಕಾಲೇಜಿನಲ್ಲಿ ಹಾಗೂ ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದಲ್ಲಿ ವಿಜ್ಞಾನ ಮತ್ತು ಸಂಸ್ಕೃತದ ವಿಶೇಷ ಅಧ್ಯಯನವನ್ನು ಮಾಡಿದ್ದಾರೆ. ಇವರು ರಾಷ್ಟ್ರಪತಿ ಸುವರ್ಣ ಪದಕ ಪುರಸ್ಕಾರ (೨೦೦೩), ಯು ಜಿ ಸಿ ಯ ರಿಸರ್ಚ್ ಫೆಲೋಶಿಪ್ (೨೦೦೩),ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ ಯ ರಿಸರ್ಚ್ ಫೆಲೋಶಿಪ್ (೨೦೦೮--) ಗಳನ್ನೂ ಸಾಧಿಸಿದವರಾಗಿದ್ದಾರೆ. ಮುಂಬೈ ಐಐಟಿ ಯ ವಿಜ್ಞಾನಿಗಳು-ಇಂಜಿನಿಯರಿಂಗ್ ವಿದ್ಯಾರ್ಥಿಗಳು ಇವರಿಂದ ಸಂಸ್ಕೃತ ಮಾತನಾಡಲು ಪ್ರೇರಿತರಾಗುತ್ತಿದ್ದಾರೆ. ಅಭಿನಂದನೆಗಳು, ಮಹೇಶ್...

21 July 2010

ಖಂಡಿಗೆ ಮದಕ

ಊರಿನ ಹಿರಿಯರಿಗೆಲ್ಲ ಖಂಡಿಗೆ ಮದಕದ ಪ್ರಯೋಜನ ಗೊತ್ತಿದೆ, ಹುಡುಗರಿಗೆ ಅಲ್ಲಿ ನೀರು ನಿಲ್ಲುತ್ತದೆ ಅಂತ ಮಾತ್ರ ಗೊತ್ತು. ಮಣ್ಣಿನ ರಸ್ತೆಯ ಇಕ್ಕೆಲಗಳಲ್ಲಿ ಸಾಲಾಗಿ ನೆಟ್ಟ ತೆಂಗಿನ ಮರದಿಂದಾಗಿ ಅಲ್ಲಿಗೆ ತೆಂಗಿನ ಸಾಲು ಅಂತ ಹೇಳುತ್ತಾರೆ ಎಂಬುದು ಇನ್ನು ಕೆಲವರಿಗೆ ಗೊತ್ತು. ಅಧ್ಯಯನದ ವಿಚಾರಕ್ಕೆ ಬಂದಾಗ ಮದಕದ ಪ್ರಸ್ತಾಪವಾಯಿತು. ಹತ್ತಿರದಲ್ಲೇ ಇರುವ ಈ ಮದಕವನ್ನು ಕಂಡು ಬಂದಾಗ ವಿದ್ಯಾರ್ಥಿಗಳಿಗೂ ಖುಷಿಯಾಯಿತು.

19 July 2010

ನೀರ್ಚಾಲು ಅಂಗನವಾಡಿಯಲ್ಲಿ ಮಳೆನೀರ ಸಂಗ್ರಹಣೆ

ಮೊನ್ನೆಯ ದಿನ ಏಳನೇ ತರಗತಿ ವಿದ್ಯಾರ್ಥಿಗಳ ಪ್ರಯಾಣ ನೀರ್ಚಾಲು ಅಂಗನವಾಡಿಗೆ. ಅಲ್ಲಿ ಮಳೆನೀರ ಸಂಗ್ರಹಣೆ ವ್ಯವಸ್ಥೆಯನ್ನು ಮಾಡಿದ್ದಾರೆ. ಚಾವಣಿ ನೀರ ಸಂಗ್ರಹ ವ್ಯವಸ್ಥೆಯ ನೇರ ಪ್ರಾತ್ಯಕ್ಷಿಕೆ ವೀಕ್ಷಿಸಿ ನಮ್ಮ ವಿದ್ಯಾರ್ಥಿಗಳಿಗೆ ಸಂತಸವಾಯಿತು.

17 July 2010

ಕೋಳಿಮರಿಗಳ ವಿತರಣೆ

ರಾಷ್ಟ್ರೀಯ ಕೃಷಿ ವಿಕಸನ ಪದ್ಧತಿಯ ಅಂಗವಾಗಿ ಆಯ್ದ ಶಾಲಾ ವಿದ್ಯಾರ್ಥಿಗಳಿಗೆ ವಿತರಿಸಲಾಗುವ ಉಚಿತ ಕೋಳಿಮರಿಗಳನ್ನು ಇಂದು ನಮ್ಮ ಶಾಲೆಯಲ್ಲಿ ವಿತರಿಸಲಾಯಿತು. ಪಶುವೈದ್ಯ ಡಾಚಂದ್ರಬಾಬು, ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಎಂ.ಅಬ್ಬಾಸ್ ಉಪಸ್ಥಿತರಿದ್ದರು. ತಲಾ ಐದು ಕೋಳಿಮರಿಗಳನ್ನು ವಿತರಿಸಲಾಗಿತ್ತು.

14 July 2010

ಕಾರು ಬಂತು...

ನಮ್ಮ ವಿದ್ಯಾರ್ಥಿಗಳಿಗೆ ಇಂತಹ ಚಿತ್ರಗಳನ್ನು ಬಿಡಿಸುವುದರಲ್ಲಿ ನಿರಂತರ ಆಸಕ್ತಿ. ಇದು ವಿನೋದ್ ಕುಮಾರ್ ಬಿಡಿಸಿದ ಚಿತ್ರ.

09 July 2010

ಮೈಕುರಿ ಗದ್ದೆಗೆ ಪಯಣ...

ನಿನ್ನೆ ಭತ್ತದ ನಾಟಿಯ ಸಂಭ್ರಮ. ಮೈಕುರಿ ಮಹಾಲಿಂಗ ನಾಯ್ಕರ ಗದ್ದೆಯಲ್ಲಿ ನಮ್ಮ ವಿದ್ಯಾರ್ಥಿಗಳೂ ಭತ್ತದ ನಾಟಿ ಮಾಡಿ ಸಂಭ್ರಮಿಸಿದರು.

08 July 2010

ಮತ್ತೆ ಶೇಖರಕಾನ...

ನಮ್ಮ ಶಾಲಾ ವಿದ್ಯಾರ್ಥಿಗಳ ಈ ಬಾರಿಯ ಪ್ರಯಾಣ ನಿನ್ನೆ, ಜಲಪಾತದ ಕಡೆಗೆ...

ಸಮಾಜ ವಿಜ್ಞಾನ ಕ್ಲಬ್ ಉದ್ಘಾಟನೆ

ಶಾಲಾ ಸಮಾಜ ವಿಜ್ಞಾನ ಕ್ಲಬ್ ಉದ್ಘಾಟನೆ ನಿನ್ನೆ ೦೭.೦೭.೨೦೧೦ ಬುಧವಾರ ಜರಗಿತು. ಶಾಲಾ ಮುಖ್ಯೋಪಾಧ್ಯಾಯರು ಉದ್ಘಾಟಿಸಿದರು. ಹಿರಿಯ ಅಧ್ಯಾಪಕರಾದ ಕೆ.ನಾರಾಯಣ ಭಟ್ ಅಧ್ಯಕ್ಷತೆ ವಹಿಸಿದರು. ಸಮಾಜ ವಿಜ್ಞಾನ ಶಿಕ್ಷಕ ಎಚ್.ಸೂರ್ಯನಾರಾಯಣ, ಇತರ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

02 July 2010

ರಕ್ಷಕ ಶಿಕ್ಷಕ ಸಂಘದ ಮಹಾಸಭೆ

“ಕಳೆದ ಕೆಲವಾರು ವರ್ಷಗಳಿಂದ ಉತ್ತಮ ಫಲಿತಾಂಶ ದಾಖಲಿಸುತ್ತಾ ಬಂದಿರುವ ಮಹಾಜನ ವಿದ್ಯಾಸಂಸ್ಥೆ ಈಗ ಶತಮಾನೋತ್ಸವ ವರ್ಷದ ಹೊಸ್ತಿಲಿನಲ್ಲಿದೆ. ಶತಮಾನೋತ್ಸವದ ಆಚರಣೆಗೆ ಇದು ಸ್ಪೂರ್ತಿ ನೀಡುತ್ತದೆ. ಶಾಲೆ ಮತ್ತು ವಿದ್ಯಾರ್ಥಿಗಳ ಪ್ರಗತಿಯಲ್ಲಿ ರಕ್ಷಕ ಶಿಕ್ಷಕ ಸಂಘದ ಪಾತ್ರ ಮಹತ್ತರವಾದದ್ದು” ಎಂದು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕೆ.ಗೋಪಾಲಕೃಷ್ಣ ಭಟ್ ಅಭಿಪ್ರಾಯಪಟ್ಟರು. ಅವರು ೦೨.೦೭.೨೦೧೦ ಶುಕ್ರವಾರ ನಮ್ಮ ಶಾಲಾ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಅಬ್ಬಾಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಗತ ವರ್ಷದ ವರದಿ ವಾಚಿಸಿದರು. ಶಾಲಾ ಹಿರಿಯ ಸಂಸ್ಕೃತ ಅಧ್ಯಾಪಕ ಎಸ್.ವಿ.ಭಟ್ ಸ್ವಾಗತಿಸಿದರು. ಹಿರಿಯ ಅಧ್ಯಾಪಕ ಕೆ.ನಾರಾಯಣ ಭಟ್ ಧನ್ಯವಾದ ಸಮರ್ಪಿಸಿದರು.

ವಿದ್ಯಾರಂಗ ಉದ್ಘಾಟನೆ

‘ಸಾಹಿತ್ಯ ಎಂದರೆ ಸಾಗರದಂತೆ ವಿಶಾಲವಾದುದು. ಸಾಹಿತ್ಯ ವೇದಿಕೆ ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯನ್ನು ಹೊರತರುವ ವೇದಿಕೆಯಾಗಿದೆ. ವಿದ್ಯಾರ್ಥಿಗಳು ಇದನ್ನು ಪೋಷಿಸಿ ಬೆಳೆಸಬೇಕು.’ ಎಂದು ಹಿರಿಯ ಸಾಹಿತಿ ವಿ.ಬಿ.ಕುಳಮರ್ವ ಅಭಿಪ್ರಾಯಪಟ್ಟರು. ಅವರು ೦೨.೦೭.೨೦೧೦ ಶುಕ್ರವಾರ ನಮ್ಮ ಶಾಲಾ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು.

ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಅಧ್ಯಾಪಕರಾದ ಎಸ್.ವಿ.ಭಟ್, ವಾಣಿ.ಪಿ.ಎಸ್ ಶುಭಾಶಂಸನೆಗೈದರು. ವಿದ್ಯಾರ್ಥಿ ವಿನೀತ್ ಶಂಕರ್.ಎಚ್ ಗತ ವರ್ಷದ ಚಟುವಟಿಕೆಗಳ ವರದಿ ವಾಚಿಸಿದರು. ವಿದ್ಯಾರ್ಥಿಗಳಾದ ಶಾಂತಿ.ಕೆ ಸ್ವಾಗತಿಸಿ ಸುಬ್ರಹ್ಮಣ್ಯ ಪ್ರಸಾದ.ಕೆ ವಂದಿಸಿದರು. ವಿದ್ಯಾರ್ಥಿನಿ ರಂಜಿತಾ ಕಾರ್ಯಕ್ರಮ ನಿರೂಪಿಸಿದಳು. ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.