Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

28 January 2013

“ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ಅಗತ್ಯ” : ಎಸ್.ಆರ್.ಶೇಟ್

“ನೈತಿಕ ಶಿಕ್ಷಣದ ಅನಿವಾರ್ಯತೆ ವಿದ್ಯಾರ್ಥಿ ಸಮಾಜದಲ್ಲಿ ಅಧಿಕವಾಗುತ್ತಿದೆ. ‘ಅತಿ’ ಎಂಬುದು ವಿದ್ಯಾರ್ಥಿಗಳನ್ನು ದಾರಿ ತಪ್ಪಿಸಲು ಆರಂಭಿಸಿದೆ. ಇಂಟರ್‌ನೆಟ್ ಮತ್ತಿತರ ಸಮೂಹ ಮಾಧ್ಯಮಗಳ ಅತಿಯಾದ ಬಳಕೆಯಿಂದಾಗಿ ವಿದ್ಯಾರ್ಥಿಗಳು ಹಾದಿ ತಪ್ಪುವ ಅವಕಾಶಗಳು ಅಧಿಕವಾಗಲಾರಂಭಿಸಿದೆ. ಶೈಕ್ಷಣಿಕ ವರ್ಷದ ಆರಂಭದಲ್ಲಿ ಸರಕಾರ ರೂಪಿಸುವ ವಾರ್ಷಿಕ ಚಟುವಟಿಕೆಯಲ್ಲಿ ಈ ಬಗ್ಗೆ ಸ್ಪಷ್ಟ ಕಲ್ಪನೆಗಳನ್ನು ಅಳವಡಿಸಿಕೊಳ್ಳಬೇಕಾಗಿದೆ.”ಎಂದು ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಎಸ್.ಆರ್.ಶೇಟ್ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಜರಗಿದ ವರ್ಧಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಪ್ರೌಢಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಂ.ನಟರಾಜ ರಾವ್, ಕಾರ್ಯಕಾರಿ ಸಮಿತಿ ಸದಸ್ಯ ಮಹಾಲಿಂಗ ಪಾಟಾಳಿ, ಮಹಾಜನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿ. ಮಹಾಲಿಂಗ ಭಟ್ ಶುಭಹಾರೈಸಿದರು.

ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರವಿಕೃಷ್ಣ. ಯು ವರದಿ ವಾಚಿಸಿದರು. ಮಹಾಜನ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಜಯದೇವ ಖಂಡಿಗೆ ಸ್ವಾಗತಿಸಿದರು. ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ವಂದಿಸಿದರು. ಶಾರೀರಿಕ ಶಿಕ್ಷಣ ಅಧ್ಯಾಪಕ ಎಂ.ಸೂರ್ಯನಾರಾಯಣ ಕಾರ್ಯಕ್ರಮವನ್ನು ನಿರೂಪಿಸಿದರು. ಬೆಳಗ್ಗೆ ಮಹಾಜನ ಹಳೆ ವಿದ್ಯಾರ್ಥಿ ಸಂಘದ ಮಹಾಸಭೆಯೂ ಜರಗಿತು.

18 January 2013

ಜನವರಿ 28ರಂದು ಶಾಲಾ ವಾರ್ಷಿಕೋತ್ಸವ

ವರ್ಷಂಪ್ರತಿ ನಡೆಯುವಂತೆ ಶಾಲಾ ವಾರ್ಷಿಕೋತ್ಸವವು ಜನವರಿ 28, 2013 ರಂದು ನಮ್ಮ ಶಾಲೆಯಲ್ಲಿ ನಡೆಯಲಿದೆ. ನೆರೆಯ ನವಜೀವನ ಹೈಯರ್ ಸೆಕೆಂಡರಿ ಶಾಲೆಯ ಶ್ರೀ ಎಸ್. ಆರ್. ಶೇಟ್ ಸಭಾಧ್ಯಕ್ಷತೆ ವಹಿಸಲಿದ್ದಾರೆ. ವಾರ್ಷಿಕೋತ್ಸವದ ಅಂಗವಾಗಿ ಅದೇ ದಿನ ಬೆಳಗ್ಗೆ ಶಾಲಾ ಸಭಾಂಗಣದಲ್ಲಿ ಹಳೆ ವಿದ್ಯಾರ್ಥಿಗಳ ಸಮಾವೇಶವೂ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ಪ್ರಸ್ತುತ ಶಾಲಾ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳು ಜರಗುತ್ತಿವೆ.

ರಾಜ್ಯ ಮಟ್ಟದ ಕಲೋತ್ಸವದಲ್ಲಿ...

ನಮ್ಮ ಶಾಲೆಯ ವಿದ್ಯಾರ್ಥಿಗಳು ಈ ಬಾರಿ ಕಲೋತ್ಸವದಲ್ಲಿ ರಾಜ್ಯ ಮಟ್ಟದ ತನಕ ಬೆಳೆದಿದ್ದಾರೆ. ಕೇರಳದ ಮಧ್ಯಭಾಗ ಮಲಪ್ಪುರಂನಲ್ಲಿ ನಡೆಯುತ್ತಿರುವ 53ನೇ ರಾಜ್ಯ ಮಟ್ಟದ ಕಲೋತ್ಸವದಲ್ಲಿ  ಭಾಗವಹಿಸಲು ನಮ್ಮ ಶಾಲೆಯ ಒಂಬತ್ತು ಮಂದಿ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಇವುಗಳಲ್ಲಿ ಮೊನ್ನೆ 16ರಂದು ಜರಗಿದ ವಂದೇಮಾತರಂ ಗಾಯನದಲ್ಲಿ ಹತ್ತನೇ ತರಗತಿಯ ಸುಶೀಲಾ. ಎಸ್, ಅಂಕಿತಾ. ಪಿ, ಚೈತ್ರಾ. ಎನ್, ಇಶಿಕಾ, ಒಂಭತ್ತನೇ ತರಗತಿಯ ಭಾಗ್ಯಶ್ರೀ. ಕೆ. ಎಸ್, ಅಶ್ವಿನಿ. ಕೆ ಹಾಗೂ ರಮ್ಯಶ್ರೀ ಇವರ ತಂಡ ‘ಎ’ ಗ್ರೇಡ್ ಪಡೆದಿದೆ. ನಿನ್ನೆ ಜರಗಿದ ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ಭಾಗ್ಯಶ್ರೀ ಕೆ. ಎಸ್ ‘ಬಿ’ ಗ್ರೇಡ್ ಪಡೆದಿದ್ದಾಳೆ. ಒಂಭತ್ತನೇ ತರಗತಿಯ ಶ್ರದ್ಧಾ. ಎಸ್ ಭಾಗವಹಿಸುವ ಮಿಮಿಕ್ರಿ ಸ್ಪರ್ಧೆ ನಾಡಿದ್ದು ಭಾನುವಾರ, ಅಂದರೆ ಕಲೋತ್ಸವದ ಕೊನೆಯ ದಿನ ಒಂದನೇ ವೇದಿಕೆಯಲ್ಲಿ ಪ್ರದರ್ಶನಗೊಳ್ಳಲಿದೆ. ವಿದ್ಯಾರ್ಥಿಗಳಿಗೆ ಶುಭಾಶಯಗಳು.