Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

20 December 2013

ನಾಡಿನ ಪ್ರಗತಿಯಲ್ಲಿ `ಮಹಾಜನ'ದ ಕೊಡುಗೆ ಅಪಾರ: ಎನ್.ಎ.ನೆಲ್ಲಿಕುನ್ನು


“ಗ್ರಾಮೀಣ ಪ್ರದೇಶದ ಪ್ರಗತಿಯಲ್ಲಿ ವಿದ್ಯಾಸಂಸ್ಥೆಗಳ ಕೊಡುಗೆ ಗಣನೀಯವಾದುದು. ನೂರು ವರ್ಷಗಳ ಹಿಂದೆ ಮಹಾಜನರಿಂದ ಆರಂಭವಾದ ಈ ಶಾಲೆ ಕಾಸರಗೋಡು ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಅಪಾರ ಕೊಡುಗೆ ನೀಡಿದೆ. ಮುಂದೆಯೂ ಈ ವಿದ್ಯಾಲಯವು ನಾಡಿನ ಪ್ರಗತಿಗೆ ನೆರವಾಗುವಂತೆ ಹೈಯರ್ ಸೆಕೆಂಡರಿ ವಿಭಾಗವನ್ನು ತೆರೆಯಲು ಪ್ರಯತ್ನಿಸುತ್ತೇನೆ ಎಂದು ಕಾಸರಗೋಡು ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಎ.ನೆಲ್ಲಿಕುನ್ನು ಅಭಿಪ್ರಾಯಪಟ್ಟರು. ಅವರು 20.12.2013 ಶುಕ್ರವಾರ ಬೆಳಗ್ಗೆ ನಮ್ಮ ಶಾಲೆಗಳ ಶತಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷೆ ಸುಧಾ ಜಯರಾಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಸ್ತು ಪ್ರದರ್ಶನವನ್ನು ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯೆ ಸೌಮ್ಯಾ ಮಹೇಶ್ ಉದ್ಘಾಟಿಸಿದರು. ಕಾಸರಗೋಡು ಜಿಲ್ಲಾ ಪಂಚಾಯತು ಸದಸ್ಯೆ ಪ್ರಮೀಳ ಸಿ.ನಾಯಕ್, ಕಾಸರಗೋಡು ಬ್ಲೋಕ್ ಪಂಚಾಯತು ಸದಸ್ಯೆ ರಜನಿ, ಬದಿಯಡ್ಕ ಗ್ರಾಮ ಪಂಚಾಯತು ಉಪಾಧ್ಯಕ್ಷ ಕೆ.ಎನ್. ಕೃಷ್ಣ ಭಟ್, ಬದಿಯಡ್ಕ ಗ್ರಾಮ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷ ಮಾಹಿನ್ ಕೇಳೋಟ್, ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯರಾದ ಗಂಗಾಧರ ಗೋಳಿಯಡ್ಕ, ಶೀಲಾ ಕೆ.ಎನ್.ಭಟ್. ಮಂಜುನಾಥ ಮಾನ್ಯ ಶುಭ ಹಾರೈಸಿದರು.
ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಸ್ವಾಗತಿಸಿ, ಮಹಾಜನ ಸಂಸ್ಕೃತ ಕಾಲೇಜು ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ವಂದಿಸಿದರು. ಶಾಲಾ ಶಿಕ್ಷಕ ಎಂ.ಸೂರ್ಯನಾರಾಯಣ ಕಾರ್ಯಕ್ರಮ ನಿರೂಪಿಸಿದರು.
ವಸ್ತು ಪ್ರದರ್ಶನ:
ಹಳೆಯ ಕಾಲದಲ್ಲಿ ಉಪಯೋಗದಲ್ಲಿದ್ದ ಕಳಸೆ, ನೊಗ, ಎತ್ತಿನ ಗಾಡಿಯ ಚಕ್ರ, ಗೋಡೆ ಗಡಿಯಾರ, ಏತ, ದೀಪಗಳು, ಪಾತ್ರೆಗಳು, ಅಳತೆ ಸಾಧನಗಳು, ತೂಕದ ಕಲ್ಲುಗಳು, ಬೆಳ್ಳಿಯ ಕಡಗಗಳು, ಮಾನಸ ಸರೋವರ, ಯಾಣ ಸಹಿತ ದೇಶದ ವಿವಿಧ ಪ್ರದೇಶದಿಂದ ಸಂಗ್ರಹಿಸಿದ ಕಲ್ಲುಗಳು, ಶತಮಾನದ ಹಿಂದಿನ ಕೈಗಡಿಯಾರ, ಮುಡಿಗುದ್ದುವ ಕೋಲು, ಕಂಚಿನ ಇಸ್ತ್ರಿ ಪೆಟ್ಟಿಗೆ, ಕಂಚಿನ ಕೂಜಾವು, ಕಬ್ಬಿಣದ ತೂಗುದೀಪ, ನಾಣ್ಯ ಸಂಗ್ರಹ, ಠಸೆಕಾಗದಗಳ ಪ್ರದರ್ಶಿನಿ, ಚಿತ್ರಕಲೆ, ಕರಕುಶಲ ಉತ್ಪನ್ನಗಳು ಇತ್ಯಾದಿಗಳನ್ನು ಪ್ರದರ್ಶಿಸಲಾಗುತ್ತಿದೆ. ಪರಿಸರದ ಕಲ್ಲಕಟ್ಟ, ಬಡಗಮೂಲೆ, ಖಂಡಿಗೆ, ಕಾಂತಿಲ, ಹೊಸಮನೆ, ಚಾಳೆತ್ತಡ್ಕ ಇತ್ಯಾದಿ ಹಳೆಯ ಸಾಂಪ್ರದಾಯಿಕ ಮನೆಗಳಲ್ಲಿದ್ದ ಈ ಸಂಗ್ರಹಗಳು ಶತಮಾನದ ಮೌಲ್ಯವುಳ್ಳವುಗಳು. ಹತ್ತನೇ ತರಗತಿ ವಿದ್ಯಾರ್ಥಿಗಳಾದ ನವೀನ್ ಕುಮಾರ್ ಮತ್ತು ತಂಡದವರು ತಯಾರಿಸಿದ ಶಾಲೆಯ ಪ್ರಸ್ತುತ ಕಟ್ಟಡಗಳ ಮಾದರಿ ಹೆಚ್ಚಿನ ಗಮನ ಸೆಳೆಯುತ್ತಿದೆ. ಶಾಲಾ ಚಿತ್ರಕಲಾ ಶಿಕ್ಷಕ ಗೋವಿಂದ ಶರ್ಮ ಈ ಪ್ರದರ್ಶಿನಿಯನ್ನು ವ್ಯವಸ್ಥೆಗೊಳಿಸಲು ಹೆಚ್ಚಿನ ಮುತುವರ್ಜಿ ವಹಿಸಿದ್ದಾರೆ.
ಆಕರ್ಷಕ ಸನ್ಮಾನ ಪತ್ರ:
ಮೂರು ದಿನಗಳ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಶಾಲೆಯ ಪೂರ್ವ ವಿದ್ಯಾರ್ಥಿಗಳಾದ ಖ್ಯಾತ ಜ್ಯೋತಿಷಿ ಬೇಳ ಪದ್ಮನಾಭ ಶರ್ಮ ಇರಿಞ್ಞಾಲಕ್ಕುಡ, ಖ್ಯಾತ ಕವಿ ನಾಡೋಜ ಡಾ|ಕಯ್ಯಾರ ಕಿಞ್ಞಣ್ಣ ರೈ, ಖ್ಯಾತ ಬೊಂಬೆಯಾಟ ಕಲಾವಿದ ಕೆ.ವಿ.ರಮೇಶ್ ಇವರನ್ನು ಸನ್ಮಾನಿಸಲಾಗುವುದು. ಈ ಸನ್ಮಾನ ಪತ್ರವು ಅತ್ಯಂತ ಆಕರ್ಷಕವಾಗಿದ್ದು, ಒಂದು ಗ್ರಾಂ ಚಿನ್ನವನ್ನು ಯಥಾವತ್ತಾಗಿ ಇದರಲ್ಲಿ ಅಳವಡಿಸಲಾಗಿದೆ. ಪಾರದರ್ಶಕವಾಗಿರುವ ಈ ಸನ್ಮಾನ ಪತ್ರವು ಸನ್ಮಾನ ಕಾರ್ಯಕ್ರಮದ ಘನತೆಯನ್ನು ಹೆಚ್ಚಿಸಲಿದೆ.









No comments:

Post a Comment